ಮಂಡ್ಯ: ಜಿಲ್ಲೆಯಲ್ಲಿ 151 ಮಕ್ಕಳು ತೀವ್ರ ಅಪೌಷ್ಟಿಕತೆ, 4 ಸಾವಿರ ಮಕ್ಕಳು ಸಾಧಾರಣಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದು 3ನೇ ಕೋವಿಡ್ ಅಲೆಯಿಂದ ಈ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಜಿಲ್ಲೆಯಲ್ಲಿರುವ 20 ಲಕ್ಷ ಜನಸಂಖ್ಯೆಯಲ್ಲಿ 0–18 ವಯೋಮಾನದೊಳಗಿನ 10 ಸಾವಿರ ಮಕ್ಕಳನ್ನು ಗುರುತಿಸಲಾಗಿದೆ. ಇದರಲ್ಲಿ ಶೇ 40ರಷ್ಟು ಮಂದಿ ಮಕ್ಕಳು ತೀವ್ರ ಹಾಗೂ ಸಾಧಾರಣಾ ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಸಂಭಾವ್ಯ 3ನೇ ಕೋವಿಡ್ ಅಲೆ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಬರಲಿದೆ ಎಂಬ ವರದಿ ಇರುವ ಹಿನ್ನೆಲೆಯಲ್ಲಿ ಈ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂಬುದು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಒತ್ತಾಯವಾಗಿದೆ.
ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು, ಮಕ್ಕಳ ಆರೈಕೆ ಕೇಂದ್ರ ತೆರೆಯಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಮಕ್ಕಳ ಆರೋಗ್ಯದತ್ತ ಕಾಳಜಿ ವಹಿಸಿದೆ. ಇದೇ ಕಾರಣಕ್ಕೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯ ಪ್ರವಾಸ ಕೈಗೊಂಡು ಸಿದ್ಧತೆ ಪರಿಶೀಲಿಸುತ್ತಿದ್ದಾರೆ.
‘ಮಕ್ಕಳಿಗಾಗಿ ಕೋವಿಡ್ ಕೇರ್ ಕೇಂದ್ರ ತೆರೆಯುವಲ್ಲಿ ಈಗಾಗಲೇ ತಡವಾಗಿದೆ. ಆದಷ್ಟು ಬೇಗ ಆರೈಕೆ ಕೇಂದ್ರ ತೆರೆದು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮನೆಮನೆಗೆ ತೆರಳಿ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಬೇಕು’ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಕೆ.ಎಂ.ಮಹೇಶ್ ಒತ್ತಾಯಿಸಿದರು.
ಚುಚ್ಚುಮದ್ದು ಪಡೆಯಲು ಅಡ್ಡಿ: ಕಳೆದೆರಡು ತಿಂಗಳಿಂದ ಕೋವಿಡ್ ಲಾಕ್ಡೌನ್ ಇರುವ ಪರಿಣಾಮ ಮಕ್ಕಳಿಗೆ ನಿಗದಿತ ಚುಚ್ಚುಮದ್ದು ಹಾಕಿಸಲು ಸಾಧ್ಯವಾಗಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ, ಲಸಿಕೆಯೇ ಆದ್ಯತೆಯ ಮೇರೆಗೆ ನಡೆಯುತ್ತಿರುವ ಕಾರಣ ಮಕ್ಕಳಿಗೆ ಚುಚ್ಚುಮದ್ದು ನೀಡಲು ಅಡ್ಡಿಯಾಗಿದೆ. ಜೊತೆಗೆ ಪೊಷಕರು ಕೂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕುತ್ತಿದ್ದಾರೆ.
ಅಂಗನವಾಡಿ, ಆಶಾ, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಕೋವಿಡ್ ಕರ್ತವ್ಯದಲ್ಲಿರುವ ಕಾರಣ ಮಕ್ಕಳ ಆರೋಗ್ಯದತ್ತ ಕಾಳಜಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ 3ನೇ ಅಲೆ ಆರಂಭವಾಗುವಷ್ಟರಲ್ಲಿ ಮಕ್ಕಳಿಗೆ ಬಾಕಿ ಚುಚ್ಚುಮದ್ದು ಹಾಕಿಸಿ ಅವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ.
‘ತಾಯಿ ಕಾರ್ಡ್ನಲ್ಲಿರುವ ಎ ವಿಟಮಿನ್, ಡಿಟಿಪಿ ಬೂಸ್ಟರ್ ಚುಚ್ಚುಮದ್ದು ತಪ್ಪಿ ಹೋಗಿದೆ. ಆಸ್ಪತ್ರೆಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಚುಚ್ಚುಮದ್ದು ಅಭಿಯಾನ ಈಗ ನಡೆಯುತ್ತಿಲ್ಲ. ಎಲ್ಲೆಡೆ ಕೋವಿಡ್ ಹರಡುತ್ತಿದ್ದ ಕಾರಣ ಆಸ್ಪತ್ರೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ’ ಎಂದು ಗಾಂಧಿನಗರದ ನಿವಾಸಿ ಶಾರದಮ್ಮ ಹೇಳಿದರು.
ಪೌಷ್ಟಿಕ ಆಹಾರ ವಿತರಣೆ: ಸಚಿವೆ ಶಶಿಕಲಾ ಜೊಲ್ಲೆ ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಿಟ್ನಲ್ಲಿ ವಿಟಮಿನ್, ಕಬ್ಬಿಣಾಂಶದ ಮಾತ್ರಗಳು, ಒಆರ್ಎಸ್ ಇವೆ. ಇದನ್ನು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರ ವಿತರಣೆ ಮಾಡಲಾಗುತ್ತಿದೆ. ಸಾಧಾರಣಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಇತರ 4 ಸಾವಿರ ಮಕ್ಕಳಿಗೂ ಕಿಟ್ ವಿತರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಮಕ್ಕಳ ತಜ್ಞರಿಗೆ ತರಬೇತಿ
‘ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವ ಕುರಿತು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಮಕ್ಕಳ ವೈದ್ಯರಿಗೆ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.
‘ಅಪೌಷ್ಟಿಕತೆ ಕಡಿಮೆ ಇರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಕುರಿತಂತೆ ವೈದ್ಯರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.
* ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ಆರೈಕೆ ಕೇಂದ್ರ ತೆರೆಯಲಾಗುವುದು. ವೈದ್ಯರ ಸಲಹೆಯಂತೆ ಅವರ ಮೇಲೆ ನಿಗಾ ವಹಿಸಲಾಗುವುದು
–ಚೇತನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.