
ಕೆ.ಆರ್.ಪೇಟೆ: ‘ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಬಡಾವಣೆಯ ಸರ್ವೆ ನಂ. 141ರಲ್ಲಿ ದಲಿತರು ಬೇಸಾಯ ಮಾಡುತ್ತಿದ್ದ 1ಎಕರೆ 31 ಗುಂಟೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ, ದಲಿತರ ಭೂಮಿಯನ್ನು ಬಲಾಡ್ಯರಿಗೆ ಹಂಚಿಕೆ ಮಾಡಲಾಗಿದೆ. ದಲಿತರಿಗೆ ಸೇರಿದ ಭೂಮಿಯನ್ನು ದಲಿತರಿಗೆ ವಾಪಸ್ ಕೊಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಾತಂಗಿ ಮಾದಿಗ ಸಮಾಜ ಪರಿವರ್ತನಾ ವೇದಿಕೆ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಸ್.ಯು.ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಸತಿ ನಿವೇಶನ ಹಂಚುವ ಸಲುವಾಗಿ 1988ರಲ್ಲಿ ವಶಪಡಿಸಿಕೊಂಡ ಸರ್ವೆ ನಂಬರ್ ನಲ್ಲಿ ನಂ.141ರಲ್ಲಿರುವ 1ಎಕರೆ 31ಗುಂಟೆ ಜಮೀನನ್ನು ಭೂಸ್ವಾಧೀನ ಪಡೆಸಿಕೊಂಡಿರುವುದಿಲ್ಲ. 2011-12ನೇ ಸಾಲಿನವರೆಗೂ ನಮ್ಮ ಕುಟುಂಬದ ಹೆಸರಿನಲ್ಲಿಯೇ ಜಮೀನು ಇದ್ದು ಆನಂತರ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಭೂಮಿ ಕಳೆದುಕೊಂಡ ಕುಟುಂಬದವರು ಆರೋಪಿಸಿದರು.
ಸಮಸ್ಯೆಯನ್ನು ಬಗೆಹರಿಸಿಕೊಡದಿದ್ದರೆ ತಾಲ್ಲೂಕು ಕಚೇರಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಪ್ರಭು ಹಿತ್ತಲಮನಿ, ರಾಜ್ಯ ಕಾರ್ಯದರ್ಶಿ ಮಹೇಶ್ ದೊಡ್ಡಮನಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊಸಹೊಳಲು ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಆಲೇನಹಳ್ಳಿ ಚೆಲುವರಾಜು, ನಾಗಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಯ್ಯ ಡಿ.ಸ್ವಾಮಿ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಮುಖಂಡರಾದ ಕತ್ತರಘಟ್ಟ ರಾಜೇಶ್, ಮಾಂಬಹಳ್ಳಿ ಜಯರಾಂ, ಜಯಶಂಕರ್, ಹೊಸಹೊಳಲು ನಂಜಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.