ಮಂಡ್ಯ: ಮಹಿಳೆಯರು ಸಮಾಜದಲ್ಲಿ ಶಕ್ತಿಯಾಗಿ ನಿಲ್ಲುವ ಮೂಲಕ ತಮ್ಮ ಮೇಲೆ ನಡೆಯುವ ದೌರ್ಜನ್ಯ ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರೈತ ನಾಯಕಿ ಸುನಂದಾ ಜಯರಾಂ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಸಾಧಕರಿಗೆ ಸನ್ಮಾನ, ಎಚ್.ಆರ್. ಕನ್ನಿಕಾ ಅವರ ‘ಬದುಕ ಶುಭದೊಸಗೆ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯ ರೂಡಿಸಿಕೊಳ್ಳಬೇಕು. ತಮ್ಮ ವಿರುದ್ಧ ಅನ್ಯಾಯವಾದಾಗ ದನಿಯೆತ್ತಬೇಕು. ಮಂಡ್ಯ ಜಿಲ್ಲೆಗೆ ಅಂಟಿರುವ ಹೆಣ್ಣು ಭ್ರೂಣ ಹತ್ಯೆ ಕಳಂಕವನ್ನು ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು’ ಎಂದು ತಿಳಿಸಿದರು.
‘ಮಹಿಳೆಯರಿಗೆ ವೇತನ ತಾರತಮ್ಯದ ಬಗ್ಗೆ ಹೋರಾಟ ನಡೆಸಿದ್ದರಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಾರಂಭಿಸಿದರು. ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ರಕ್ಷಣೆಯನ್ನು ಸಂವಿಧಾನ ನೀಡಿದೆ. ಕಾನೂನುಗಳ ಬಗ್ಗೆಯೂ ಮಹಿಳೆಯರು ತಿಳಿದುಕೊಳ್ಳಬೇಕು ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಪುರುಷನಷ್ಟೇ ಕೆಲಸವನ್ನು ಮಹಿಳೆ ಮಾಡುತ್ತಾಳೆ, ಮನೆಯ ಜವಾಬ್ದಾರಿಯಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದು ಕಾಣ ಸಿಗುತ್ತವೆ. ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ನೀಡುವ ಕೆಲಸಗಳು ವೇಗವಾಗಿ ನಡೆದರೆ ಮಾತ್ರ ಪುರುಷ ಸಮಾಜದಲ್ಲಿ ಮಹಿಳೆಗೆ ಬೆಲೆ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕಿ ಎಂ.ಎಸ್.ಅನಿತಾ ಮಂಗಲ ಅವರು ಕೃತಿ ಬಿಡುಗಡೆ ಮಾಡಿ ಅದರ ಪರಿಚಯ ಮಾಡಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂಜುಳಾ, ಡಾ.ಬಿ.ಎಸ್. ಸೀತಾಲಕ್ಷ್ಮಿ, ಎಸ್.ಪಿ.ಮಂಜುಳಾ, ವರ್ಷಹೂಗಾರ್, ಸಿ.ಕುಮಾರಿ, ಎಂ.ಪಿ. ಸವಿತಾ, ಎಲ್. ಉಮಾ, ಎಸ್.ಜಿ. ವಿಜಯಾ, ಎನ್. ಮಾಧುರಿ, ಬಿಂದುರಾವ್, ಸೌಮ್ಯ ಶ್ರೀರಾಮ್, ಜಯಶ್ರೀ, ಕೆ.ಎಸ್. ಶೋಭಾ, ಸೌಮ್ಯ ಶ್ರೀಹರ್ಷ, ಆರ್.ಮಹಾಲಕ್ಷ್ಮಿ, ರಾಣಿ ಚಂದ್ರಶೇಖರ್, ಟಿ.ಎಂ. ಸೌಮ್ಯಾ, ಭಾರತಿ ಕುಮಾರ್, ಜಿ.ಎಸ್. ನಂದಿನಿ, ಎನ್.ಅನಿರಾ, ಅಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಉಪಯೋಜನಾ ಸಮನ್ವಯಾಧಿಕಾರಿ ಟಿ.ಲಕ್ಷ್ಮಿ, ವಾರ್ತಾಧಿಕಾರಿ ಎಸ್.ಎಚ್. ನಿರ್ಮಲಾ, ಕನ್ನಿಕಾ ಶಿಲ್ಪ ನವೋದಯ ಟ್ರಸ್ಟ್ನ ಉಪಾಧ್ಯಕ್ಷೆ ಎಲ್.ಕಮಲ, ಸಂಘಟಕಿ ಬಿ.ಎಸ್. ಅನುಪಮಾ, ಮಂಗಲ ಜಿ. ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ. ರಮೇಶ್, ಕಾರ್ಯದರ್ಶಿ ಕೆ.ಎಂ. ಕೃಷ್ಣೇಗೌಡ ಭಾಗವಹಿಸಿದ್ದರು.
Cut-off box - ಕೃತಿ ಪರಿಚಯ ಕೃತಿ ಹೆಸರು– ‘ಬದುಕ ಶುಭದೊಸಗೆ’ ಲೇಖಕಿ– ಎಚ್.ಆರ್.ಕನ್ನಿಕಾ ಬೆಲೆ– ₹85 ಪುಟಗಳ ಸಂಖ್ಯೆ– 63 ಪ್ರಕಾಶಕರು– ಐಡಿಯಲ್ ಪಬ್ಲಿಕೇಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.