ADVERTISEMENT

ಮಂಡ್ಯ ರೈತ ಸಂಕಷ್ಟದಲ್ಲಿರುವಾಗ ಜೋಡೆತ್ತುಗಳು ನಾಪತ್ತೆ: ಮಾಜಿ ಸಂಸದ ಶಿವರಾಮೇಗೌಡ

ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 11:30 IST
Last Updated 29 ಸೆಪ್ಟೆಂಬರ್ 2019, 11:30 IST
   

ಮಂಡ್ಯ: ‌‘ಬೆಳೆದು ನಿಂತಿರುವ ಕಬ್ಬು ಕಟಾವು ಆಗದೇ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ರೈತರೊಂದಿಗೆ ಇರುವುದಾಗಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಭರವಸೆ ನೀಡಿದ್ದ ಜೋಡೆತ್ತುಗಳ ಪತ್ತೆಯೇ ಇಲ್ಲ’ ಎಂದು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ ಅವರು ನಟರಾದ ದರ್ಶನ್‌ ಮತ್ತು ಯಶ್‌ ಬಗ್ಗೆ ವ್ಯಂಗ್ಯವಾಡಿದರು.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಸಮಯದಲ್ಲಿ ಮಂಡ್ಯದ ಉದ್ದಗಲಕ್ಕೂ ಸಂಚರಿಸಿದ್ದ ಈ ಜೋಡೆತ್ತುಗಳು ಈಗ ಸಂಸದರನ್ನು ಕರೆದುಕೊಂಡು ಬಂದು, ರೈತರ ಸಮಸ್ಯೆ ಪರಿಹರಿಸಲಿ. ಹೋರಾಟ ಮಾಡಿ, ರೈತರ ಕಣ್ಣೀರು ಒರೆಸಲಿ’ ಎಂದು ಸವಾಲು ಹಾಕಿದರು.

‘ಲೋಕಸಭೆ ಚುನಾವಣೆಯಲ್ಲಿ, ನಿಖಿಲ್‌ ಕುಮಾರಸ್ವಾಮಿ ಅವರನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ್ದೆವು. ಆದರೆ, ಒಂದು ವರ್ಗದ ಜನ ಸ್ವಾಭಿಮಾನಕ್ಕೆ ಮತ ಕೊಡಬೇಕು ಎಂದು ಸುಮಲತಾ ಅವರಿಗೆ ಮತ ನೀಡಿ ಗೆಲ್ಲಿಸಿದ್ದರು. ಜನರ ಸಮಸ್ಯೆ ಆಲಿಸಲು, ಪರಿಹರಿಸಲು ಸುಮಲತಾ ಅವರು ಮಂಡ್ಯದಲ್ಲೇ ಇರುತ್ತಾರೆ ಎಂದುಕೊಂಡಿದ್ದರು. ಆದರೆ, ರೈತರು ಸತ್ತರೂ ಇಲ್ಲ, ಬಾಯಿ ಬಡಿದುಕೊಂಡರೂ ಇಲ್ಲ; ಸಂಸದರನ್ನು ಹುಡುಕಬೇಕಾದ ಪರಿಸ್ಥಿತಿ ಇದೆ’ ಎಂದು ದೂರಿದರು.

ADVERTISEMENT

‘ಚುನಾವಣೆಯ ನಂತರ, ಇನ್ನು ರಾಜಕೀಯ ಸಾಕು. ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದ ಸಂಸದರು ಈಗ ರೈತರ ಸಮಸ್ಯೆ ಬಗೆಹರಿಸಲು ಬರಲಿ. ಅವರು ಮುಂದೆ ನಡೆದರೆ, ನಾವು ಹಿಂದೆ ಬರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.