
ಮದ್ದೂರು: ಕೆಮ್ಮಣ್ಣು ನಾಲೆ ಸೇರಿದಂತೆ, ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಕಾಮಗಾರಿಗಳು ಪೂರ್ಣಗೊಳ್ಳಲು ಸಹಕರಿಸಬೇಕೆಂದು ಶಾಸಕ ಕೆ.ಎಂ ಉದಯ ರೈತರಿಗೆ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ಅಚ್ಚುಕಟ್ಟು ಪ್ರದೇಶಗಳ ರೈತರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
‘ದೇಶಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮನವರ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಂತರ ಹೂಳೆತ್ತಲು ಕೂಡಾ ಕ್ರಮ ವಹಿಸಲಾಗುವುದು. ಇದರಿಂದ ಹೆಚ್ಚಿನ ನೀರಿನ ಸಂಗ್ರಹಣೆಯನ್ನು ಮಾಡಲು ಸಾಧ್ಯವಾಗುತ್ತದೆ’ ಎಂದರು.
ಕೆಮ್ಮಣ್ಣು ನಾಲಾ ಆಧುನೀಕರಣ ಕೆಲಸ ಉತ್ತಮ ನಡೆಯುತ್ತಿದ್ದು, ಬೈರನ್, ಚಾಮನಹಳ್ಳಿ ಹಾಗೂ ವೈದ್ಯನಾಥಪುರ ನಾಲೆಗಳ ರೈತರು ಸ್ವಲ್ಪ ತಿಂಗಳು ಸಹಕರಿಸಿದರೆ ಅಂದು ಕೊಂಡಹಾಗೆ ಕೆಲಸಗಳು ಆಗುತ್ತವೆ. ಇದರಿಂದಾಗಿ ಕೆಲವರು ರೈತರಿಗೆ ತೊಂದರೆಯಾಗಬಹುದು. ಆದರೆ ಶಾಶ್ವತವಾದ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಮುಂದಿನ 75 ರಿಂದ 100 ವರ್ಷಗಳವರೆಗೆ ಸಮೃದ್ಧಿಯ ಬೆಳೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ’ ಎಂದರು.
‘ಬೇಸಿಗೆ ಬೆಳೆಯ ವಿಷಯದಲ್ಲಿ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಮುಂದಿನ ಬೆಳೆಯಿಂದ ಸುಲಲಿತ ಹಾಗೂ ಸಮರ್ಪಕವಾಗಿ ಬೆಳೆಗಳಿಗೆ ನೀರು ಹರಿಸಲು ಅನುಕೂಲವಾಗಲಿದೆ. ಶಾಶ್ವತವಾದ ನೀರಾವರಿ ಪರಿಹಾರ ಈ ಭಾಗದ ರೈತರಿಗೆ ಆಗಲಿದೆ’ ಎಂದರು.
ರೈತ ಅಪೂರ್ವ ಚಂದು ಮಾತನಾಡಿ, ‘ಶೇ 75 ರಿಂದ 100 ವರ್ಷ ಉಳಿಯಬಹುದಾದ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕೆಲಸವಾಗುತ್ತಿದೆ. 8 ರಿಂದ 10 ದಿನ ನೀರು ಹರಿಸಿ 20 ದಿನ ಕಾಮಗಾರಿಯನ್ನು ನಡೆಸಿರಿ’ ಎಂದರು.
ಈಗಾಗಲೇ ಇರುವ ಬೆಳೆಗಳಿಗೆ ತೊಂದರೆಯಾಗದಂತೆ ಹಾಗೂ ತೆಂಗು ಬೆಳೆಗೂ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಬೈರನ್ ನಾಲಾ ಹಾಗೂ ವೈದ್ಯನಾಥಪುರ ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಚಲುವರಾಜು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ನೀರಾವರಿ ಇಲಾಖೆ ಅಧಿಕಾರಿಗಳಾದ ನಂಜುಂಡೇಗೌಡ, ನಾಗರಾಜು ಹಾಗೂ ಅಚ್ಚುಕಟ್ಟು ಪ್ರದೇಶಗಳ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.