ADVERTISEMENT

ಮದ್ದೂರಮ್ಮ ಜಾತ್ರೆ: ಇಂದು ಕೊಂಡ, ನಾಳೆ ಸಿಡಿ

ಬಿರು ಬೇಸಿಗೆಯಲ್ಲೂ ಸಂಭ್ರಮದ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ

​ಪ್ರಜಾವಾಣಿ ವಾರ್ತೆ
Published 1 ಮೇ 2024, 6:21 IST
Last Updated 1 ಮೇ 2024, 6:21 IST
ಮದ್ದೂರಮ್ಮ ದೇವರ ವಿಗ್ರಹ
ಮದ್ದೂರಮ್ಮ ದೇವರ ವಿಗ್ರಹ   

ಮದ್ದೂರು: ಪಟ್ಟಣದ ಗ್ರಾಮದೇವತೆ, ಶಕ್ತಿ ದೇವತೆ ಮದ್ದೂರಮ್ಮನವರ ಜಾತ್ರಾಮಹೋತ್ಸವದ ಸಡಗರ ಹೆಚ್ಚುತ್ತಿದ್ದು ಜಿಲ್ಲೆ, ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಮದ್ದೂರಿನತ್ತ ಬರುತ್ತಿದ್ದಾರೆ.

ದೇವಿಯವರ ದರ್ಶನಕ್ಕೆ ಬರುವ ಅಸಂಖ್ಯಾತ ಭಕ್ತರಲ್ಲಿ ಭಕ್ತಿಭಾವ ಇಮ್ಮಡಿಗೊಳ್ಳುತ್ತಿದ್ದು ಪಟ್ಟಣದಾದ್ಯಂತ ಸಂಭ್ರಮ ಮನೆ ಮಾಡಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಕೊಂಡ ಮಹೋತ್ಸವ, ಮೇ 2ರಂದು ಸಿಡಿ ಉತ್ಸವ ಜರುಗಲಿದೆ. ಹೀಗಾಗಿ ಪಟ್ಟಣ ಜನರಿಂದ ತುಂಬಿ ಹೋಗುತ್ತಿದೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾರಿ ದನಗಳ ಜಾತ್ರೆ 4 ದಿನಗಳ ಹಿಂದೆಯೇ ಆರಂಭವಾಗಿದೆ. ದೇವಾಲಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ಬಿರು ಬಿಸಿಲಿನಲ್ಲೂ ಭಕ್ತರ ಸಡಗರ, ಸಂಭ್ರಮ ತೀವ್ರಗೊಳ್ಳುತ್ತಿದೆ.

ADVERTISEMENT

ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಶ್ರೀ ಮದ್ದೂರಮ್ಮ ಮಠಮನೆ ದೇವಸ್ಥಾನದಲ್ಲಿ ಹೋಮ, ಹವನ ಕಾರ್ಯ ನಡೆದವು. 2.30 ಕ್ಕೆ  ಎಲ್ಲಮ್ಮ ದೇವಿಯವರಿಗೆ ಚಂದ್ರಭಂಡಾರ ಸೇವೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ಸಂಜೆ 6.30 ಕ್ಕೆ ಶ್ರೀ ಮದ್ದೂರಮ್ಮನವರ ಮೂಲ ದೇಗುಲದಲ್ಲಿ ಅಭಿಷೇಕ, ಹೋಮ, ಹವನ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ , ರಾತ್ರಿ 11.30ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ ಪೂಜಾ ಕಾರ್ಯಕ್ರಮಗಳು ನಡೆದವು.

ಬುಧವಾರ ಜೇಷ್ಠ ನಕ್ಷತ್ರ ಶುಭ ಬ್ರಾಹ್ಮಿ ಮಹೂರ್ತದಲ್ಲಿ ಬೆಳಿಗ್ಗೆ 6 ಗಂಟೆಗೆ ಮದ್ದೂರಮ್ಮನವರ ಕೊಂಡೋತ್ಸವ ನಡೆಯಲಿದ್ದು, ಸಂಜೆ 4.30ಕ್ಕೆ ಹೆಣ್ಣು ಮಕ್ಕಳಿಂದ ಮದ್ದೂರಮ್ಮನವಿರಗೆ ಹಾಲರವಿ ಸೇವೆ ನಡೆಯಲಿದೆ.

ಮೇ 2ರಂದು  ಸಂಜೆ 4ಯ ನಂತರ ಗಂಟೆಗೆ ಮಠ ಮನೆಯಿಂದ ಭಕ್ತರಿಂದ ಬಾಯಿಬೀಗ ಸಮೇತ  ಸಿಡಿರಣ್ಣನವರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.  ಉಯ್ಯಾಲೆ ಉತ್ಸವ ರಾತ್ರಿ 9 ಗಂಟೆಗೆ ನಡೆಯಲಿದೆ. ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನರು ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲಿದ್ದಾರೆ.

‘ಮದ್ದೂರಿನ ಗ್ರಾಮದೇವತೆಯಾದ ಮದ್ದೂರಮ್ಮನವರು ಶಕ್ತಿ ದೇವತೆಯಾಗಿದ್ದು, ಭಕ್ತರು ಬಯಸಿದ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ’ ಎಂದು ಮದ್ದೂರಮ್ಮ ದೇಸ್ಥಾನದ ಟ್ರಸ್ಟ್ ಅಧ್ಯಕ್ಷ ಯಶವಂತ್‌ ತಿಳಿಸಿದರು.

ಕ್ಷೇತ್ರದ ಹಿನ್ನಲೆ: ಇತಿಹಾಸದ ಉಲ್ಲೇಖದಂತೆ ಹಿಂದೆ ಅಡಿಕೆ ವ್ಯಾಪಾರಿಯಾಗಿದ್ದ ಭೈರಶೆಟ್ಟಿ ಎಂಬಾತ ಮಡಿಕೇರಿ ಕಡೆಯಿಂದ ತನ್ನ ಎತ್ತಿನ ಗಾಡಿಯಲ್ಲಿ ಅಡಿಕೆ ತರುತ್ತಿದ್ದಾಗ ಆ ಗಾಡಿಯಲ್ಲಿ ದೇವತೆ ಕುಳಿತು ಬರುತ್ತಿದ್ದರು. ಆಗ ಮದ್ದೂರು ಬಳಿ ಈಗಿರುವ ಮೈಸೂರು - ಬೆಂಗಳೂರು ಹೆದ್ದಾರಿ ಬಳಿಯಿರುವ ದೇವಸ್ಥಾನದ ಜಾಗದಲ್ಲಿ ಹೆಚ್ಚಿನ ಹಿಪ್ಪೆ ಮರ ಇದ್ದವು, ಇಂತಹ ತಂಪಾದ ಜಾಗದಲ್ಲಿ ನೆಲೆಸಬೇಕು ಎಂದು ದೇವತೆಯು ಅಲ್ಲಿಯೇ ನೆಲೆಸಿದಳು ಎಂದು ಐತಿಹ್ಯವಿದೆ.

ಮದ್ದೂರಮ್ಮ ದೇವಸ್ಥಾನದ ಹೊರನೋಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.