ADVERTISEMENT

ಜಿ.ಮಾದೇಗೌಡರ ಅಂತಿಮ ದರ್ಶನ ಪಡೆದ ಗಣ್ಯರು: ಗಾಂಧಿಭವನದ ಆವರಣದಲ್ಲಿ ನೀರವ ಮೌನ

ಜಿ.ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದ ಸಕ್ಕರೆ ಜಿಲ್ಲೆ,

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 11:53 IST
Last Updated 18 ಜುಲೈ 2021, 11:53 IST
ಮಂಡ್ಯದ ಗಾಂಧಿಭವನಕ್ಕೆ ಜಿ.ಮಾದೇಗೌಡರ ಮೃತದೇಹ ತಂದಾಗ ವಿವಿಧ ಸಂಘಟನೆಗಳ ಮುಖಂಡರು ಮೌನ ಆಚರಿಸಿ ಕಂಬನಿ ಮಿಡಿದರು
ಮಂಡ್ಯದ ಗಾಂಧಿಭವನಕ್ಕೆ ಜಿ.ಮಾದೇಗೌಡರ ಮೃತದೇಹ ತಂದಾಗ ವಿವಿಧ ಸಂಘಟನೆಗಳ ಮುಖಂಡರು ಮೌನ ಆಚರಿಸಿ ಕಂಬನಿ ಮಿಡಿದರು   

ಮಂಡ್ಯ: ಮಾಜಿ ಸಂಸದ, ಮುತ್ಸದ್ಧಿ ನಾಯಕ ಜಿ.ಮಾದೇಗೌಡರ ನಿಧನಕ್ಕೆ ಸಕ್ಕರೆ ನಾಡು ಕಂಬನಿ ಮಿಡಿಯಿತು. ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಾರು ಜನರು ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ನಸುಕಿನ 5.30ರ ವೇಳೆಗೆ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಯಿತು. ಅವರ ಸಂಬಂಧಿಕರು, ಒಡನಾಡಿಗಳು ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಸಂಸದೆ ಸುಮಲತಾ ಕೂಡ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು. ನಂತರ ಮಾದೇಗೌಡರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬೆಳಿಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ಗಾಂಧಿಭವನದ ಆವರಣಕ್ಕೆ ಕೊಂಡೊಯ್ಯಲಾಯಿತು. ಅಪಾರ ಸಂಖ್ಯೆಯ ಸಾರ್ವಜನಿಕರು ಅಲ್ಲಿಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಗಾಂಧಿ ಭವನದ ಪ್ರವೇಶದ್ವಾರದಲ್ಲಿ ಮಾದೇಗೌಡರೊಂದಿಗೆ ಪತ್ರಿಕೆ ಓದುತ್ತಾ ಕುಳಿತಿರುತ್ತಿದ್ದ ಅವರ ಒಡನಾಡಿಗಳು ಅವರ ಮೃತದೇಹ ಕಂಡು ಕಣ್ಣು ತುಂಬಿಕೊಂಡರು.

ADVERTISEMENT

ಗಾಂಧಿಭವನದ ಆವರಣದಲ್ಲಿ ನೀರವ ಮೌನ ಆವರಿಸಿತ್ತು. ಭವನದೊಳಗೆ ಮೃತದೇಹ ತಂದಾಗ ವಿವಿಧ ಸಂಘಟನೆಗಳ ಮುಖಂಡರು ಮೌನದಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಶಾಸಕ ಎಂ.ಶ್ರೀನಿವಾಸ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ ಮುಂತಾದವರು ದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ನಮ್ಮ ಜಿಲ್ಲೆಯಲ್ಲಿ ಜಿ.ಮಾದೇಗೌಡರು ಮಾದರಿ ರಾಜಕಾರಣಿಯಾಗಿದ್ದರು. ಅವರು ನಿಧನದಿಂದ ಇಡೀ ರಾಜ್ಯದ ರಾಜಕಾರಣಕ್ಕೆ ನಷ್ಟ ಉಂಟಾಗಿದೆ’ ಎಂದರು.

ಹೋರಾಟಗಾರರ ಭೇಟಿ: ರಾಜಕಾರಣಿಯಾಗಿಯೂ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಾದೇಗೌಡರ ಅಂತಿಮ ದರ್ಶನ ಪಡೆಯಲು ರಾಜ್ಯದ ವಿವಿಧೆಡೆಯಿಂದ ರೈತ ಹೋರಾಟಗಾರರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ ‘ಜಿ.ಮಾದೇಗೌಡರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. 6 ಬಾರಿ ಶಾಸಕರಾಗಿ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಅದಲ್ಲದೇ ಇಳಿ ವಯಸ್ಸಿನಲ್ಲೂ ಕಾವೇರಿ ವಿವಾದ ಬಗೆಹರಿಸಬೇಕು ಎಂಬ ಇಚ್ಛಾಶಕ್ತಿ ಇಟ್ಟುಕೊಂಡಿದ್ದರು. ಸರ್ಕಾರದ ತಪ್ಪುಒಪ್ಪುಗಳನ್ನು ತಿದ್ದುತ್ತಿದ್ದರು. ಅಂತಹ ನಾಯಕ ಅಗಲಿರುವುದು ಹೋರಾಟ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.