ADVERTISEMENT

ಮಂಡ್ಯ: ಮದುವೆಯಾಗಲು ಹೆಣ್ಣು ಕೊಡಿಸುವಂತೆ ಪ್ರಾರ್ಥಿಸಿ ಬ್ರಹ್ಮಚಾರಿಗಳ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 20:36 IST
Last Updated 23 ಫೆಬ್ರುವರಿ 2023, 20:36 IST
 ಬ್ರಹ್ಮಚಾರಿಗಳ ಪಾದಯಾತ್ರೆ
 ಬ್ರಹ್ಮಚಾರಿಗಳ ಪಾದಯಾತ್ರೆ   

ಭಾರತೀನಗರ (ಮಂಡ್ಯ ಜಿಲ್ಲೆ): ಮದುವೆಯಾಗಲು ವಧುಗಳನ್ನು ಕರುಣಿಸುವಂತೆ ಮಲೆಮಹದೇಶ್ವರನಲ್ಲಿ ಪ್ರಾರ್ಥಿಸಿ, ಜಿಲ್ಲೆಯ ವಿವಿಧೆಡೆಯ ಅವಿವಾಹಿತ ಯುವಕರು,‘ಬ್ರಹ್ಮಚಾರಿಗಳ ನಡೆ ಮಲೆ ಮಾದಪ್ಪನೆಡೆಗೆ’ ಘೋಷಣೆಯೊಂದಿಗೆ ಗುರುವಾರ ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಆರಂಭಿಸಿದರು.

ಚಿತ್ರನಟ ಡಾಲಿ ಧನಂಜಯ ನಸುಕಿನ 5 ಗಂಟೆಗೆ ಯಾತ್ರೆಗೆ ಚಾಲನೆ ನೀಡಿ, ‘ದೇಶದ ಅನ್ನದಾತರಾದ ರೈತರ ಮಕ್ಕಳಿಗೆ ಪ್ರೀತಿಯಿಂದ ಹೆಣ್ಣು ಕೊಟ್ಟು ಮದುವೆ ಮಾಡಬೇಕೇ ಹೊರತು ಹಿಂದು–ಮುಂದು ನೋಡಬಾರದು. ಬಡವರ ಮಕ್ಕಳಿಗೆ ಹೆಣ್ಣು ಕೊಡ್ರಪ್ಪ’ ಎಂದು ಕೋರಿದರು. ಮಳವಳ್ಳಿ ಮುಖ್ಯರಸ್ತೆವರೆಗೂ ತೆರಳಿ ಯಾತ್ರಿಗಳನ್ನು ಬೀಳ್ಕೊಟ್ಟರು.

ರೈತರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ 100ಕ್ಕೂ ಹೆಚ್ಚು ಯುವಕರು ಕೇಸರಿ ಬಣ್ಣದ ಪತಾಕೆ ಹಿಡಿದು ಮುಂದುವರಿದರು. ದಾರಿಯುದ್ದಕ್ಕೂ ‘ಮಹದೇಶ್ವರ ಸ್ವಾಮಿಗೆ ಜೈ’, ‘ಉಘೇ ಮಹದೇವ’ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

‘ಹೆಣ್ಣು ಹೆತ್ತವರು ಸರ್ಕಾರಿ ನೌಕರಿಯಲ್ಲಿರುವ ಯುವಕರೇ ಬೇಕೆನ್ನುತ್ತಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಸಾವಿರಾರು ಯುವಕರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವಿವಾಹಿತರೆಂಬ ಪಟ್ಟ ತೆಗೆದು ವಧುಭಾಗ್ಯ ಕರುಣಿಸುವಂತೆ ಕೋರಿ ಪಾದಯಾತ್ರೆ ಮಾಡುತ್ತಿದ್ದೇವೆ’ ಎಂದು ಪಾದಯಾತ್ರಿಯೊಬ್ಬರು ತಿಳಿಸಿದರು.

ಕೆಲವು ತಿಂಗಳ ಹಿಂದೆ ಆದಿ ಚುಂಚನಗಿರಿ ಮಠ ಏರ್ಪಡಿಸಿದ್ದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 700–800 ವಧುಗಳಿಗೆ 25 ಸಾವಿರಕ್ಕೂ ಅಧಿಕ ವರಗಳು ಬಂದಿದ್ದರಿಂದ ಸಮಾವೇಶದಲ್ಲಿ ಗೊಂದಲ ಉಂಟಾಗಿತ್ತು.

ಈ ಬೆಳವಣಿಗೆಯಿಂದ ಬೇಸತ್ತ ಅವಿವಾಹಿತರು, ‘ದೇವರ ಕೃಪೆಯಿಂದಾದರೂ ಹೆಣ್ಣು ದೊರೆಯಲಿ’ ಎಂಬ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮಳವಳ್ಳಿ, ಕೊಳ್ಳೇಗಾಲ, ಹನೂರು, ಕೌದಳ್ಳಿ, ತಾಳುಬೆಟ್ಟದ ಮಾರ್ಗವಾಗಿ ಯಾತ್ರೆ ಫೆ.25 ರಂದು ಮಹದೇಶ್ವರ ಬೆಟ್ಟ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.