
ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದ ಲಕ್ಷ್ಮಮ್ಮ ಮತ್ತು ಎಂ.ಕೆ.ಶಿವಣ್ಣ ಅವರ ಪುತ್ರಿ ಎಂ.ಎಸ್.ಯಶಸ್ವಿನಿ ಹಾಗೂ ಹುಲ್ಕೆರೆಕೊಪ್ಪಲು ಗ್ರಾಮದ ಸುಶೀಲಮ್ಮ ಮತ್ತು ಚಿಂದೇಗೌಡರ ಪುತ್ರ ಸಿ.ಸೋಮಶೇಖರ್ ಅವರು ಸಸಿ ನೆಟ್ಟು, ರಕ್ತದಾನ ಮಾಡಿ ದಾಂಪತ್ಯಕ್ಕೆ ಕಾಲಿಡುವ ಮೂಲಕ ಶುಕ್ರವಾರ ಕುವೆಂಪು ಅವರ ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದರು.
ಮಂಗಲದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆದ ಮಂತ್ರಮಾಂಗಲ್ಯಕ್ಕೆ ಶ್ರೀನಾದನಂದನಾಥಸ್ವಾಮಿ, ನಟ ಚೇತನ್ ಅಹಿಂಸಾ, ನಟಿ ಪೂಜಾಗಾಂಧಿ ಅವರ ಹಾಜರಾತಿ ಇತ್ತು. ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಅರ್ಥಪೂರ್ಣ ಸಾಂಸಾರಿಕ ಹಾದಿಯನ್ನು ತುಳಿದರು.
ರೈತ ನಾಯಕಿ ಸುನಂದಾ ಜಯರಾಂ ಅವರು ವಿವಾಹ ಸಂಹಿತೆ ಬೋಧನೆ ಮಾಡಿ ನವ ಜೋಡಿಗೆ ಶುಭ ಹಾರೈಸಿದರು. ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾಕೇಂದ್ರ ಟ್ರಸ್ಟ್ನ ಶ್ರೀನಾದನಂದನಾಥಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಟ ಚೇತನ್ ಅಹಿಂಸಾ ಮಾತನಾಡಿ, ಕುವೆಂಪು ಅವರ ಪರಿಕಲ್ಪನೆಯ ಮದುವೆ ಸಮಾಜಕ್ಕೆ ಮಾದರಿ ಎಂದರು.
ಚಲನಚಿತ್ರ ನಟಿ ಪೂಜಾಗಾಂಧಿ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಾನು ಕೂಡ ಮಂತ್ರ ಮಾಂಗಲ್ಯವನ್ನೇ ಆಯ್ದುಕೊಂಡು ಮದುವೆಯಾದೆ. ಮತ್ತೊಂದು ಜೀವ ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ ಎಂದು ತಿಳಿಸಿದರು.
ನಾವು ದ್ರಾವಿಡ ಕನ್ನಡಿಗರ ಚಳವಳಿಯ ಮುಖಂಡ ಅಭಿ ಒಕ್ಕಲಿಗ, ಅಲಯನ್ಸ್ ಸಂಸ್ಥೆ ಸೌತ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಜನಶಕ್ತಿ ಎಂ.ಸಿದ್ದರಾಜು ಮಾತನಾಡಿದರು.
ನೆಲದನಿ ಬಳಗದ ಪೊಷಕಿ ರುಕ್ಮಿಣಿ, ಆಧ್ಯಕ್ಷ ಎಂ.ಸಿ.ಲಂಕೇಶ್, ವೈದ್ಯ ಡಾ.ಎಚ್.ಎಸ್.ರವಿಕುಮಾರ್, ಕುಮಾರಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.