ADVERTISEMENT

ಮಂಡ್ಯ: ಕುತೂಹಲ ಮೂಡಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಇಂದು ಮಧ್ಯಾಹ್ನ 12.30ಕ್ಕೆ ಚುನಾವಣಾ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 5:45 IST
Last Updated 17 ನವೆಂಬರ್ 2020, 5:45 IST
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್   

ಮಂಡ್ಯ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಕಾರ ಹಿಡಿಯಲು ಜೆಡಿಎಸ್- ಬಿಜೆಪಿ ಸಖ್ಯ ಬಹುತೇಕ ಖಚಿತವಾಗಿದ್ದು ಇಂದು ಮಧ್ಯಾಹ್ನ ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕುತೂಹಲ ಮೂಡಿಸಿದೆ.

ಸ್ಪಷ್ಟ ಬಹುಮತ ಇದ್ದರೂ ಕಾಂಗ್ರೆಸ್‌ ಗೆ ಅಧಿಕಾರ ದೂರವಾಗಿದೆ. ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ಅಮರಾವತಿ ಅಶ್ವತ್ಥ್ ಜೆಡಿಎಸ್ ಸೇರಿರುವುದೇ ಇದಕ್ಕೆ ಕಾರಣವಾಗಿದೆ.

ಆಡಳಿತ ಮಂಡಳಿ 15 ನಿರ್ದೇಶಕ ಸ್ಥಾನ ಹೊಂದಿದ್ದು 12 ಸ್ಥಾನಗಳಿಗೆ ಚುನಾವಣೆ ನಡೆದಿದೆ. 8 ಮಂದಿ ಕಾಂಗ್ರೆಸ್ ಬೆಂಬಲಿತರು, ನಾಲ್ವರು ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.

ADVERTISEMENT

ಇಬ್ಬರು ಅಧಿಕಾರಿಗಳು, ಒಬ್ಬ ನಾಮನಿರ್ದೇಶಿತ ನಿರ್ದೇಶಕ ಇದ್ದಾರೆ.

ಅಧಿಕಾರ ಹಿಡಿಯಲು 8 ಸ್ಥಾನಗಳ ಅವಶ್ಯಕತೆ ಇದೆ. ಜೆಡಿಎಸ್ ನಾಲ್ವರು, ಕಾಂಗ್ರೆನಿಂದ ಬಂದಿರುವ ಅಶ್ವತ್ಥ್, ಅಧಿಕಾರಿಗಳು, ನಾಮನಿರ್ದೇಶಿತರ ಬೆಂಬಲದೊಂದಿಗೆ ಅಧಿಕಾರ ಪಡೆಯಲು ಜೆಡಿಎಸ್- ಬಿಜೆಪಿ ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ- ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದು ಮೈತ್ರಿಗೆ ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ ಎಂದು ಮುಖಂಡರು ಹೇಳುತ್ತಿದ್ದಾರೆ.

ರೆಸಾರ್ಟ್‌ ರಾಜಕೀಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ನಡೆಯುತ್ತಿದ್ದು ಎರಡು ದಿನಗಳಿಂದ ಜೆಡಿಎಸ್ ಬೆಂಬಲಿತರು ಹಾಗೂ ಅಶ್ವತ್ಥ್ ರೆಸಾರ್ಟ್ ನಲ್ಲಿ ತಂಗಿರುವ ವಿಚಾರ ಬೆಳಕಿಗೆ ಬಂದಿದೆ.

ಮಧ್ಯಾಹ್ನ ನೇರವಾಗಿ ಬಂದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನರೇಂದ್ರಸ್ವಾಮಿ ಕನಸಿಗೆ ತಣ್ಣೀರು: ಅಪೆಕ್ಸ್ ಬ್ಯಾಂಕ್ ಗೆ ನಾಮನಿರ್ದೇಶನಗೊಳ್ಳುವ ಕನಸಿನೊಂದಿಗೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಈಗ ಅಶ್ವತ್ಥ್ ಅವರನ್ನು ಅಪೆಕ್ಸ್ ಬ್ಯಾಂಕ್ ಗೆ ನಾಮನಿರ್ದೇಶ ಮಾಡಿ, ಬಿಜೆಪಿ ನಾಮ ನಿರ್ದೇಶಿತನಿಗೆ ಅಧ್ಯಕ್ಷ ಸ್ಥಾನ ನೀಡುವ ಲೆಕ್ಕಾಚಾರ ಗರಿಗೆದರಿದೆ. ಇದು ನಿಜವಾದರೆ ನರೇಂದ್ರಸ್ವಾಮಿ ಕನಸಿಗೆ ತಣ್ಣೀರು ಬೀಳಲಿದೆ.

ನಾಮನಿರ್ದೇಶಿತ ನಿರ್ದೇಶಕನ ಆಯ್ಕೆಯೂ ಗೋಪ್ಯವಾಗಿದ್ದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.