ADVERTISEMENT

ಮಂಡ್ಯ: ಫಲಪುಷ್ಪ ಪ್ರದರ್ಶನದಲ್ಲಿ ‘ಸಾಂಸ್ಕೃತಿಕ ಕಲರವ’

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:46 IST
Last Updated 25 ಜನವರಿ 2026, 4:46 IST
ಮಂಡ್ಯ ನಗರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಹಣ್ಣು ಮತ್ತು ತರಕಾರಿಗಳಲ್ಲಿ ಅರಳಿದ ಕ್ರಿಕೆಟ್‌ ತಾರೆಗಳು 
ಮಂಡ್ಯ ನಗರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಹಣ್ಣು ಮತ್ತು ತರಕಾರಿಗಳಲ್ಲಿ ಅರಳಿದ ಕ್ರಿಕೆಟ್‌ ತಾರೆಗಳು    

ಮಂಡ್ಯ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣ ಮತ್ತು ಕಾವೇರಿ ಉದ್ಯಾನದಲ್ಲಿ ಜ.27ರವರೆಗೆ ಆಯೋಜಿಸಿರುವ ‘ಫಲಪುಷ್ಪ ಪ್ರದರ್ಶನ–2026’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲರವಕ್ಕೂ ಆದ್ಯತೆ ನೀಡಲಾಗಿದೆ. 

ಶನಿವಾರ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನೋಹರ್‌ ತಂಡ ಹಾಗೂ ಸರಿಗಮಪ ತಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು. ತರಹೇವಾರಿ ಹೂಗಳನ್ನು ವೀಕ್ಷಿಸುತ್ತಾ ಜನರು ಹಾಸ್ಯ ಮತ್ತು ಸಂಗೀತಕ್ಕೆ ತಲೆದೂಗಿದರು. ಮಕ್ಕಳು ಕುಣಿದು ಕುಪ್ಪಳಿಸಿದರು. 

ಜ.25ರಂದು ಶಿವಾರ ಉಮೇಶ್‌ ತಂಡ ಹಾಗೂ ಜಾನಪದ ತಂಡದಿಂದ ಕಾರ್ಯಕ್ರಮ, ಜ.26ರಂದು ಗಾಯಕಿ ಶಮಿತಾ ಮಲ್ನಾಡ್‌ ತಂಡ ಮತ್ತು ನೃತ್ಯ ತಂಡದಿಂದ ರಸಸಂಜೆ ಕಾರ್ಯಕ್ರಮ ಹಾಗೂ ಜ.27ರಂದು ಸ್ಥಳೀಯ ಕಲಾವಿದರು ಮತ್ತು ಶಾಲಾ ಮಕ್ಕಳಿಂದ ನೃತ್ಯ ನಾಟಕ ಮತ್ತು ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. 

ADVERTISEMENT

ವಿದ್ಯುದ್ದೀಪಗಳಿಂದ ಸಿಂಗಾರಗೊಂಡ ಕಾವೇರಿ ಉದ್ಯಾನ ಕಂಗೊಳಿಸುತ್ತಿದೆ. ಸಾವಿರಾರು ಕ್ಯಾಪ್ಸಿಕಂ ಬಳಸಿ ತಯಾರಿಸಿರುವ ‘ಕ್ಯಾಪ್ಸಿಕಂ ಮನೆ’ ಜನರನ್ನು ಆಕರ್ಷಿಸುತ್ತಿದೆ. ತರಕಾರಿ ಮತ್ತು ಹಣ್ಣುಗಳಲ್ಲಿ ಅರಳಿದ ಹಲವಾರು ಕಲಾಕೃತಿಗಳು ಕಣ್ಣು ಕೋರೈಸುತ್ತಿವೆ. 

ಪಾರ್ಕಿಂಗ್‌ ವ್ಯವಸ್ಥೆ:

ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಕೆಲವು ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಕಚೇರಿ ಆವರಣ, ಸೆಂಟ್ರಲ್ ಪೊಲೀಸ್ ಸ್ಟೇಷನ್ ಆವರಣ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಚಾರ್ಜಿಂಗ್ ಪಾಯಿಂಟ್ ಆವರಣ ಈ ಮೂರು ಸ್ಥಳಗಳಲ್ಲಿ (ದ್ವಿಚಕ್ರ ವಾಹನ ನಿಲುಗಡೆ) ಹಾಗೂ ಕಾರ್ಮೆಲ್ ಕಾನ್ವೆಂಟ್ ಆವರಣದಲ್ಲಿ (ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ) ಅವಕಾಶ ಕಲ್ಪಿಸಲಾಗಿದೆ. 

ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಮಹಿಳೆಯರು ಮತ್ತು ಮಕ್ಕಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.