ಕಿಕ್ಕೇರಿ:ಸಮೀಪದ ಮಂದಗೆರೆ ಗ್ರಾಮದ ಆಸುಪಾಸಿನ ಗ್ರಾಮದ ಬಳಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಲಿದ್ದು, ನದಿಯ ಬಳಿ ಜನ, ಜಾನುವಾರುಗಳು ತೆರಳದಂತೆ ತಹಶೀಲ್ದಾರ್ ಎಂ. ಶಿವಮೂರ್ತಿ ಎಚ್ಚರಿಕೆ ನೀಡಿದರು.
ಮಂದಗೆರೆ, ಚಿಕ್ಕಮಂದಗೆರೆ, ಗದ್ದೆಹೊಸೂರು, ಬೇವಿನಹಳ್ಳಿ ಮತ್ತಿತರ ಗ್ರಾಮಗಳಿಗೆ ತೆರಳಿದ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಮಾತನಾಡಿದರು.
ಬಿಡದ ಸುರಿಯುತ್ತಿರುವ ಮಳೆ, ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಗೊರೂರು ಅಣೆಕಟ್ಟಿನಿಂದ 50ರಿಂದ 60ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹೊರಬಿಡುವ ಸೂಚನೆ ಇದೆ. ಈ ಕುರಿತು ಈಗಾಗಲೇ ಇಲಾಖೆಯಿಂದ ನದಿಪಾತ್ರದ ಗ್ರಾಮಗಳಿಗೆ ತೆರಳಿ ಟಾಂಟಾಂ ಹೊಡಿಸಲಾಗಿದೆ. ನದಿಗೆ ಇಳಿಯುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಜಾನುವಾರುಗಳಿಗೆ ನೀರು ಕುಡಿಸು
ವುದು, ಈಜುವಂತಹ ದುಸ್ಸಾಹ ಸಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿದರು.
ಸಾರ್ವಜನಿಕರು ಪ್ರವಾಹ ಹೆಚ್ಚಾಗಿ ಯಾವುದೇ ಅಪಾಯ ಸೂಚನೆ ಕಂಡು ಬಂದಲ್ಲಿ ಕೂಡಲೇ ವಾಟ್ಸ್ ಆ್ಯಪ್ ಫೇಸ್ಬುಕ್ ಮೂಲಕ ಮಾಹಿತಿಯಲ್ಲಿ ಹಂಚಿಕೊಳ್ಳಬಹುದಾಗಿದೆ. ಮಾಹಿತಿಗಾಗಿ 08230-262989, 88845 04666 ಸಂಪರ್ಕಿಸಬಹುದು ಎಂದು ತಿಳಿಸಿದರು.
ನದಿಪಾತ್ರದ ಹೊಲಗದ್ದೆಗಳಿಗೆ ನುಗ್ಗಿದ ಹೇಮೆ: ಉಕ್ಕಿ ಹರಿಯುತ್ತಿರುವ ಹೇಮೆಯಿಂದ ನದಿಪಾತ್ರದಲ್ಲಿರುವ ಹಲವು ಹೊಲಗದ್ದೆಗಳು ಜಲಾವೃತಗೊಂಡಿವೆ. ಬೇವಿನಹಳ್ಳಿ ಗ್ರಾಮದ ಅಂಕನಾಥೇಶ್ವರ, ಮಂದಗೆರೆಯ ಕಟ್ಟೆಪರಮೇಶ್ವರಿ ಗುಡಿಯ ಪ್ರಾಂಗಣದವರಿಗೆ ನೀರು ಪ್ರವೇಶಿಸಿದ್ದು ಯಾವುದೇ ಅಪಾಯಕರ ಸನ್ನಿವೇಶ ಉಂಟಾಗಿಲ್ಲ.
ಹೇಮಾವತಿ ಜಲಾಶಯ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ಈರಣ್ಣ, ಸಿಪಿಐ ಕೆ.ಎನ್. ಸುಧಾಕರ್, ಪಿಎಸ್ಐ ಚಂದ್ರಶೇಖರ್, ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.