ಮಂಡ್ಯ: ಜಿಲ್ಲೆಯಲ್ಲಿ ಮತಗಟ್ಟೆಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ಸ್ಥಾಪಿಸಲಾಗಿದ್ದು, ನೂತನವಾಗಿ 101 ಮತಗಟ್ಟೆ ಸ್ಥಾಪನೆಗೆಂದು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಮತಗಟ್ಟೆಗಳ ಪುನರ್ ವಿಂಗಡನೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಗ್ರಾಮಗಳಲ್ಲಿ 1,200ಕ್ಕಿಂತ ಹೆಚ್ಚು ಜನರಿರುವ ಮತಗಟ್ಟೆಗಳು ಹಾಗೂ ಮತದಾರರ ವಾಸಸ್ಥಳದಿಂದ 2 ಕಿ.ಮೀ.ಗಿಂತಲೂ ಹೆಚ್ಚು ಅಂತರವಿರುವು ಮತಗಟ್ಟೆಗಳನ್ನು ಪುನರ್ ವಿಂಗಡನೆ ಮಾಡಲು ಹಾಗೂ ಗೊಂದಲ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ 101 ಮತಗಟ್ಟೆ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.
‘ವಿಧಾನಸಭಾ ಕ್ಷೇತ್ರಗಳಾದ ಮೇಲುಕೋಟೆ(7), ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ಕ್ಷೇತ್ರದಲ್ಲಿ ತಲಾ ಒಂದು ಕಟ್ಟಡ ದುರಸ್ತಿಗೊಂಡಿದ್ದ ಒಟ್ಟು ಮತಗಟ್ಟೆಗಳನ್ನು ಬದಲಾವಣೆ ಮಾಡಲು ಕೋರಲಾಗಿದೆ. ಇಲ್ಲಿವರೆಗೂ ಖಾಸಗಿ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪನೆ ಮಾಡಿಲ್ಲ, ಎಲ್ಲವೂ ಸರ್ಕಾರ ಕಟ್ಟಡಗಳಲ್ಲಿಯೇ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ‘ಪ್ರತಿ ಮತಗಟ್ಟೆಗಳಲ್ಲಿ ಮೇಲ್ವಿಚಾರಣೆ ಮಾಡಲು ತಮ್ಮ ಪಕ್ಷಗಳ ಬೂತ್ ಲೆವಲ್ ಏಜೆಂಟರ್ ನೇಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಮತಗಟ್ಟೆ ಅಧಿಕಾರಿಗಳ ಸಮನ್ವಯದೊಂದಿಗೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯ ನಿರ್ವಹಿಸಿ’ ಎಂದು ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರವಿಶಂಕರ್, ವಿವಿದ ಪಕ್ಷದ ಮುಖಂಡರಾದ ನವೀನ್, ದಿನೇಶ್, ಬೊಮ್ಮಯ್ಯ, ಸುಂಡಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.
ಲೋಪ ಸರಿಪಡಿಸಿಕೊಳ್ಳಲು ಸಲಹೆ
‘23 ವರ್ಷಗಳ ನಂತರ ರಾಜ್ಯದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಮತದಾರರ ಸಮಗ್ರ ಪರಿಶೀಲನೆ ವೇಳೆ ಪ್ರತಿ ಮನೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಭೇಟಿ ನೀಡುವರು. 2025ನೇ ಸಾಲಿನ ಮತದಾರರ ಪಟ್ಟಿಯಲ್ಲಿ ಲಭ್ಯವಿರುವ ಎಲ್ಲಾ ಮತದಾರರಿಗೂ ಗಣತಿ ನಮೂನೆ ನೀಡುತ್ತಾರೆ. ಸದರಿ ನಮೂನೆಯಲ್ಲಿ ಮತದಾರರ ಭಾವಚಿತ್ರ ಹೆಸರು ಅಥವಾ ಯಾವುದೇ ತಿದ್ದುಪಡಿ ಇದ್ದಲ್ಲಿ ಸೂಕ್ತ ದಾಖಲಾತಿಯೊಂದಿಗೆ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಿ ಲೋಪ ಸರಿಪಡಿಸಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಕುಮಾರ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.