
ಮೇಲುಕೋಟೆ: ಹೊಸ ವರ್ಷಾರಂಭದ ಮೊದಲ ದಿನವಾದ ಗುರುವಾರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಭಕ್ತರು ಗೋವಿಂದ ಗೋವಿಂದ ಜಯಘೋಷ ಕೂಗುತ್ತಾ ದೇವರ ದರ್ಶನ ಪಡೆದರು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಪಂಚ ಕಲ್ಯಾಣಿಯಲ್ಲಿ ಭಕ್ತರು ತೀರ್ಥಸ್ನಾನ ಮಾಡಿ ಕಲ್ಯಾಣಿ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯಕ್ಕೆ ತೆರಳಿದರು.
ಸನ್ನಿಧಿಗಳಲ್ಲಿ ಧನುರ್ಮಾಸದ ನಿಮಿತ್ತ ಸುರ್ಯೋದಯಕ್ಕೂ ಮುನ್ನ ಪೂಜೆ ಕೈಂಕರ್ಯ ಆರಂಭವಾಗಿತ್ತು. ವಿವಿಧ ಬಗೆಯ ಪುಪ್ಪಗಳಿಂದ ಕಂಗೊಳಿಸುತ್ತಿದ್ದ ಚೆಲುವನಾರಾಯಣ ಸ್ವಾಮಿಯ ದರ್ಶನಕ್ಕೆ ಸುಡುಬಿಸಿಲು ಲೆಕ್ಕಿಸದೆ ದೇವಾಲಯ ಮುಂದೆ ಸರತಿ ಸಾಲಿನಲ್ಲಿ ನಿಂತು. ಗೋವಿಂದ ಗೋವಿಂದ ಜಯಘೋಷ ಕೂಗುತ್ತಾ ದೇವರ ದರ್ಶನ ಪಡೆದರು.
ಯೋಗಾನರಸಿಂಹ ಸ್ವಾಮಿ ಬೆಟ್ಟವನ್ನು ಸಾವಿರಾರು ಭಕ್ತರು ಬೆಟ್ಟಹತ್ತಿ ದೇವರ ದರ್ಶನ ಪಡೆದರು.
ರಾಯಗೋಪುರ, ಅಕ್ಕತಂಗಿಕೊಳ, ಧನುಷ್ ಕೋಟಿ, ತೊಟ್ಟಿಲುಮಡು, ಪಂಚಕಲ್ಯಾಣಿ ಸೇರಿ ವಿವಿಧ ಪ್ರವಾಸಿ ತಾಣಗಳು ರಾತ್ರಿಯವರೆಗೂ ಪ್ರವಾಸಿಗರಿಂದ ತುಂಬಿ ತುಳುಕಿದವು. ಇಲ್ಲಿನ ತಾಣಗಳ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರು, ಬೈಕ್ಗಳಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.