ADVERTISEMENT

ಚುನಾವಣಾ ಆಯೋಗ ಕಡಿವಾಣ ಹಾಕಲಿ: ಸುನಂದಾ ಜಯರಾಂ

mnd

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 14:57 IST
Last Updated 17 ಏಪ್ರಿಲ್ 2024, 14:57 IST
ಸುನಂದಾ ಜಯರಾಂ
ಸುನಂದಾ ಜಯರಾಂ   

ಮಂಡ್ಯ: ‘ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಾತುಗಳು ಮಿತಿಮೀರುವ ಮೂಲಕ ರಾಜಕೀಯ ಪಕ್ಷಗಳು ಸಭ್ಯತೆ ಮೀರಿ ನಡೆದುಕೊಳ್ಳುತ್ತಿವೆ. ಇದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು’ ಎಂದು ರೈತ ಮುಖಂಡೆ ಸುನಂದಾ ಜಯರಾಂ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಲೋಕಸಭೆ ಚುನಾವಣೆಯ ಮಹತ್ವ, ಮೌಲ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಹಕ್ಕುಗಳು ಮತ್ತು ಗಂಭೀರ ವಿಷಯಗಳ ಚರ್ಚೆ ಮಾಡದೆ ಮಹಿಳೆಯರನ್ನು ವಸ್ತುವನ್ನಾಗಿ ನೋಡುವ, ಬಳಸಿಕೊಳ್ಳುವ ಕೃತ್ಯ ಪಕ್ಷ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಅತ್ಯಂತ ಖಂಡನೀಯ’ ಎಂದಿದ್ದಾರೆ.

ಚುನಾವಣೆಯಲ್ಲಿ ಪಕ್ಷ ರಾಜಕಾರಣ ಸಭ್ಯತೆಯ ಎಲ್ಲೇ ಮೀರಿ ಪರಸ್ಪರ ನೈತಿಕತೆ, ಆಸ್ತಿ ಪಾಸ್ತಿ ಮತ್ತು ಇಲ್ಲಸಲ್ಲದ ಆರೋಪಗಳ ಮಾಡುತ್ತಾ ಅನಾವಶ್ಯಕವಾಗಿ ವ್ಯಕ್ತಿ ನಿಂದನೆಯ ಪದ ಪ್ರಯೋಗ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯರನ್ನು ಉದಾಹರಿಸಿ, ಹೋಲಿಕೆ ಮಾಡಿ ಮಾತನಾಡುವ ಮೂಲಕ ವ್ಯಕ್ತಿಗತ ಘನತೆಗೆ ದಕ್ಕೆ ತರುತ್ತಿರುವುದು, ಸಮುದಾಯಗಳ ನೆಮ್ಮದಿ ಕಲಕುವ ಕೆಲಸಗಳ ಬಗ್ಗೆ ನಾಗರಿಕ ಸಮಾಜ ಎಚ್ಚರಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಅದೇ ರೀತಿ ಚುನಾವಣಾ ಆಯೋಗ ಕಡಿವಾಣ ಹಾಕಲು ಮುಂದಾಗ ಬೇಕು. ಆರೋಗ್ಯಕರ ಸಮಾಜಕ್ಕೆ ಲಿಂಗ ಸಂವೇದನೆ ಮುಖ್ಯ, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂಬುದನ್ನು ಅರಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಚರ್ಚೆ ಅತ್ಯವಶ್ಯಕ, ಟೀಕೆ ಇರಲಿ, ಆದರೆ, ರಾಜಕಾರಣಿಗಳ ನಡೆ-ನುಡಿ ಮಾದರಿಯಾಗಿರಬೇಕೇ ಹೊರತು ಸಾರ್ವಜನಿಕ ಚರ್ಚೆಗೆ ಆಹಾರವಾಗಬಾರದು ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ, ಮಳೆ ಇಲ್ಲದೆ ನೀರಿನ ಹಾಹಾಕಾರ ಎಲ್ಲೆಡೆ ಎದುರಾಗಿ ಬೆಳೆಗಳೆಲ್ಲ ಒಣಗಿವೆ,  ಕುಡಿಯುವ ನೀರಿನ ಅಭಾವ ಉಂಟಾಗಿದೆ ಇಂತಹ ಗಂಭೀರ ವಿಷಯಗಳು ಚರ್ಚೆಯಾಗಬೇಕಿದ್ದು, ಅದರ ವಿಷಯಗಳು ರಾಜಕೀಯ ಚರ್ಚೆಗೆ ಒಳಪಡಲಿ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.