
ಮೇಲುಕೋಟೆ: ಸರ್ಕಾರವು ಹಿಂದೂ ದೇವಾಲಯಗಳ ಹಣವನ್ನು ಮಸೀದಿಗಳು ಮತ್ತು ಚರ್ಚ್ಗಳ ಅಭಿವೃದ್ಧಿಗೆ ನೀಡುವುದನ್ನು ನಿಲ್ಲಿಸಿ, ಆ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿನ ಶ್ರೀಚಲುವನಾರಾಯಣ ಸ್ವಾಮಿ ಹಾಗೂ ಯಧುಗಿರಿ ನಾಯಕಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದರು. ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಿ ಸನಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಂದಾಗ ಬೇಕು ಎಂದರು.
ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆ ಇಡೀ ರಾಜ್ಯದ ಹಿಂದೂಗಳನ್ನು ಒಗ್ಗೂಡಿಸಿದೆ. ಯಾವ ರಾಜಕಾರಣಿಗಳು ಭಾಷೆಗಾಗಿ, ದೇಶಕ್ಕಾಗಿ, ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಆ ನಾಯಕನಿಗೆ ಈ ಜಿಲ್ಲೆಯ ಜನ ಇಷ್ಟೊಂದು ಪ್ರೀತಿ ವಿಶ್ವಾಸಕ್ಕೆ ನೀಡುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ, ನಾನು ನಿಜಕ್ಕೂ ಭಾವುಕನಾಗಿದ್ದೇನೆ ಎಂದರು.
ರಾಜ್ಯದಲ್ಲಿ ಕುಟುಂಬ ರಾಜಕಾರಣ ತಿರಸ್ಕರಿಸಿ ಪಕ್ಷ ಹಾಗೂ ಹಿಂದುತ್ವ ಉಳಿವಿಗೆ ದುಡಿಯುತ್ತಿದ್ದೇನೆ. ಕೇಂದ್ರ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸಿಕೊಂಡು 2028ರ ಚುನಾವಣೆ ವೇಳೆ ರಾಜ್ಯದ ಜವಾಬ್ದಾರಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಮೇಲಕೋಟೆಗೆ ಆಗಮಿಸಿದ ಯತ್ನಾಳ ಅವರಿಗೆ ಜಕ್ಕನಹಳ್ಳಿ ಸರ್ಕಲ್ ಹಾಗೂ ಬೆಳ್ಳಾಳೆ, ಮದೇಶ್ವರಪುರ, ಕದಲಗೆರೆ ಗ್ರಾಮಗಳ ಹೆದ್ದಾರಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ಅಭಿಮಾನಿಗಳು, ನೂರಾರು ಬೈಕ್ಗಳ ಮೂಲಕ ಮೇಲುಕೋಟೆ ವರೆಗೆ ಜಾಥಾ ಮಾಡಿದರು.
ಈ ವೇಳೆ ಬಿಜೆಪಿ ಮುಖಂಡ ಎಸ್.ಎನ್.ಟಿ ಸೋಮಶೇಖರ್, ಪಾರ್ಥ, ರವಿ, ವೆಂಕಟೇಶ್ , ಶಂಕರ್ ಪಾಲ್ಗೊಂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.