ಮಂಡ್ಯ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3ನೇ ಬಾರಿ ಆರ್ಥಿಕ ನೆರವು ನೀಡುವ ಮೂಲಕ ಮೈಸೂರು ಸಕ್ಕರೆ ಕಾರ್ಖಾನೆಗೆ (ಮೈಷುಗರ್) ಉತ್ತಮ ಕೊಡುಗೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲೆಯ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2025–26ನೇ ಸಾಲಿನ ಹಂಗಾಮಿಗೆ ಕಬ್ಬು ಅರೆಯಲು ಅಗತ್ಯವಿರುವ ದುಡಿಯುವ ಬಂಡವಾಳದ ಉದ್ದೇಶಕ್ಕಾಗಿ ₹10 ಕೋಟಿಯನ್ನು ಸಾಲವಾಗಿ ಕೊಟ್ಟಿದೆ ಎಂದರು. 2023–24ನೇ ಸಾಲಿನಲ್ಲಿ ಸರ್ಕಾರ ₹50 ಕೋಟಿ ದುಡಿಯುವ ಬಂಡವಾಳ ನೀಡಿತ್ತು. ಜತೆಗೆ ₹53 ಕೋಟಿ ವಿದ್ಯುತ್ ಬಿಲ್ ಮನ್ನಾ ಮಾಡಿತ್ತು’ ಎಂದು ಹೇಳಿದರು.
‘2025–26ನೇ ಸಾಲಿನ ಕಬ್ಬು ಅರೆಯುವ ಹಂಗಾಮಿಗೆ ಕಬ್ಬು ಕಟಾವು ಮಾಡುವ ಆಳುಗಳಿಗೆ ಮತ್ತು ಸಾರಿಗೆ ವೆಚ್ಚಕ್ಕೆ ₹15 ಕೋಟಿ ಹಾಗೂ ದುಡಿಯುವ ಬಂಡವಾಳ ₹25 ಕೋಟಿ ಅಗತ್ಯವಿರುವುದರಿಂದ ಒಟ್ಟು ₹40 ಕೋಟಿ ಬಿಡುಗಡೆ ಮಾಡುವಂತೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಕೋರಿದ್ದರು.
‘ಕಳೆದ ಬಾರಿ ಬರದ ನಡುವೆಯೂ ಯಶಸ್ವಿಯಾಗಿ ಕಬ್ಬು ನುರಿಸಿ 20 ವರ್ಷಗಳ ನಂತರ ಯಾವುದೇ ಸರ್ಕಾರದ ಅನುದಾನ ಪಡೆಯದೆ ರೈತರಿಗೆ ಪೂರ್ಣ ಹಣವನ್ನು ಪಾವತಿ ಮಾಡಿ ಮಾದರಿಯಾಗಿದ್ದೇವೆ. ಈ ಬಾರಿಯೂ ಸೀನಿಯಾರಿಟಿ ಪ್ರಕಾರ 100 ಬ್ಯಾಚುಗಳು ಕಬ್ಬು ಕಟಾವು ಮಾಡುತ್ತಿವೆ. ನಿತ್ಯ 2,500 ಟನ್ ಕಬ್ಬು ನುರಿಸಲು ಸಿದ್ಧತೆ ನಡೆದಿದೆ. ಈ ಬಾರಿ ಕನಿಷ್ಠ 3.5 ಲಕ್ಷದಿಂದ 4 ಲಕ್ಷ ಟನ್ ಕಬ್ಬು ಅರೆಯುತ್ತೇವೆ’ ಎಂದು ಮಾಹಿತಿ ನೀಡಿದರು.
ಸುರೇಶ್, ವೀಣಾ ಶಂಕರ್, ಉದಯ್, ನಾಗರಾಜು, ಎಂ.ಎನ್. ಶ್ರೀಧರ್, ಸಿ.ಎಂ. ದ್ಯಾವಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಒತ್ತುವರಿ ತೆರವಿಗೆ ಕ್ರಮ: ಗಂಗಾಧರ್
ಮೈಷುಗರ್ ಕಾರ್ಖಾನೆಗೆ ಸಂಬಂಧಿಸಿದ 7 ಎಕರೆ ವಾಣಿಜ್ಯ ಜಾಗ ಮತ್ತು 26 ಎಕರೆ ಕಂದಾಯ ಜಾಗ ಒತ್ತುವರಿಯಾಗಿದೆ. ಈಗಾಗಲೇ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಮುಂಭಾಗದ 38 ಗುಂಟೆ ಜಾಗವನ್ನು ಡಿಜಿಟಲ್ ಸರ್ವೆ ಮಾಡಿಸಿದ್ದೇವೆ. ಹಂತ ಹಂತವಾಗಿ ಒತ್ತುವರಿ ತೆರವುಗೊಳಿಸಿ ಜಾಗವನ್ನು ಮೈಷುಗರ್ ಕಾರ್ಖಾನೆ ಸ್ವಾಧೀನಕ್ಕೆ ಪಡೆಯುತ್ತೇವೆ. ತೆರವುಗೊಳಿಸದಿದ್ದರೆ ಕಾರ್ಖಾನೆಯ ನಾಮಫಲಕ ಹಾಕುತ್ತೇವೆ. ನಂತರ ನಾವು ನಿಗದಿಪಡಿಸಿದ ಬಾಡಿಗೆಯನ್ನು ಅವರು ಕಟ್ಟಬೇಕಾಗುತ್ತದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. ಒತ್ತುವರಿ ತೆರವಿಗೆ ಯಾವುದಾದರೂ ಒತ್ತಡ ಬಂದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ‘ಇದುವರೆಗೆ ನಮ್ಮ ಸಚಿವರು ಮತ್ತು ಶಾಸಕರಿಂದ ಯಾವುದೇ ಒತ್ತಡ ಬಂದಿಲ್ಲ. ದೊಡ್ಡ ಕುಳಗಳು ಒತ್ತುವರಿಯನ್ನು ಮಾಡಿಕೊಂಡಿವೆ. ಯಾವುದೇ ಒತ್ತಡಕ್ಕೆ ಮಣಿಯದೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಮಾಡುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.