ADVERTISEMENT

ಸಹಕಾರಿ ಕ್ಷೇತ್ರ ಅಭ್ಯುದಯಕ್ಕೆ ಪ್ರೇರಕ:ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 3:10 IST
Last Updated 15 ಅಕ್ಟೋಬರ್ 2025, 3:10 IST
ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಕೃಷಿ ಪತ್ತಿನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷದ ನಿಮಿತ್ತ ಮಂಗಳವಾರ ನಡೆದ ‘ಸಾವಯವ ಕೃಷಿಯ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ಸಹಕಾರ ವರ್ಷದ ಭಿತ್ತಪತ್ರವನ್ನು ಜಂಟಿ ಕೃಷಿ ನಿರ್ದೇಶಕ ಅಶೋಕ್‌ ಬಿಡುಗಡೆಗೊಳಿಸಿದರು. ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ಪಾಲ್ಗೊಂಡಿದ್ದರು 
ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದ ಕೃಷಿ ಪತ್ತಿನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷದ ನಿಮಿತ್ತ ಮಂಗಳವಾರ ನಡೆದ ‘ಸಾವಯವ ಕೃಷಿಯ ಮಹತ್ವ’ ಕುರಿತ ವಿಚಾರ ಸಂಕಿರಣದಲ್ಲಿ ಅಂತರರಾಷ್ಟ್ರೀಯ ಸಹಕಾರ ವರ್ಷದ ಭಿತ್ತಪತ್ರವನ್ನು ಜಂಟಿ ಕೃಷಿ ನಿರ್ದೇಶಕ ಅಶೋಕ್‌ ಬಿಡುಗಡೆಗೊಳಿಸಿದರು. ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ಪಾಲ್ಗೊಂಡಿದ್ದರು    

ಮಂಡ್ಯ‌: ‘ಸಹಭಾಗಿತ್ವದಲ್ಲಿ ಸಾಮಾಜಿಕ ಸೇವೆಗಳನ್ನು ಸಲ್ಲಿಸಲು ಚುನಾಯಿತ ಪ್ರತಿನಿಧಿಗಳಿಗೆ ಸಹಕಾರ ಕ್ಷೇತ್ರ ಉತ್ತಮವಾಗಿದೆ’ ಎಂದು ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ತಿಳಿಸಿದರು.

ನಬಾರ್ಡ್, ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ವತಿಯಿಂದ ತಾಲ್ಲೂಕಿನ ಮಂಗಲ ಗ್ರಾಮದ ಕೃಷಿ ಪತ್ತಿನ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷದ ನಿಮಿತ್ತ ಮಂಗಳವಾರ ನಡೆದ ‘ಸಾವಯವ ಕೃಷಿಯ ಮಹತ್ವ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಜನರ ಸಹಭಾಗಿತ್ವದಲ್ಲಿ ಕೃಷಿ, ಅಭಿವೃದ್ಧಿ, ಶಿಕ್ಷಣ ಹೀಗೆ ಹಲವಾರು ವಿಷಯಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಬಹುದಾಗಿದೆ. ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿ, ಸಹಕಾರ ಕ್ಷೇತ್ರಕ್ಕೆ ವಿಶೇಷವಾದ ಆಸಕ್ತಿಯನ್ನು ತಳೆದಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಹಕಾರಿ ಕ್ಷೇತ್ರದಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ನಬಾರ್ಡ್ ನೇರವಾಗಿ ಜನರಿಗೆ ಸಹಾಯವನ್ನು ಮಾಡದಿದ್ದರೂ, ಸರ್ಕಾರ ಮತ್ತು ಸಹಕಾರ ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆ ಮೂಲಕ ಸೇವೆ ಸಲ್ಲಿಸುತ್ತಿದೆ. ಭಾರತ ದೇಶದ ಶೇ 60ರಷ್ಟು ಮಂದಿ ಸಹಕಾರಿ ಕ್ಷೇತ್ರದ ಭಾಗೀದಾರರಾಗಬೇಕಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಅಂತರರಾಷ್ಟ್ರೀಯ ಸಹಕಾರ ವರ್ಷದ ಭಿತ್ತಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ‘ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂಬ ಕೀಳರಿಮೆ ರೈತರಲ್ಲಿದೆ. ವಿವಿಧ ಹಂತಗಳಲ್ಲಿ ಕೃಷಿ ಲಾಭದತ್ತ ಸಾಗುತ್ತಿದೆ. ಸಾವಯವ ಉತ್ಪನ್ನಗಳಲ್ಲಿ ಕಲಬೆರಕೆಯನ್ನು ತಡೆಯುವ ನಿಟ್ಟಿನಲ್ಲಿ ಹಲವು ಗುಂಪುಗಳನ್ನು, ತಜ್ಞರನ್ನು ಸರ್ಕಾರ ನೇಮಕ ಮಾಡಿದೆ. ಗುಣಮಟ್ಟ ಪರೀಕ್ಷಿಸಲು ಸಾವಯವ ಕೃಷಿ ಪದ್ಧತಿಯು ಭವಿಷ್ಯದ ಮನುಕುಲ ಸಂರಕ್ಷಣೆಗೆ ಮಹತ್ವದ್ದಾಗಿದೆ’ ಎಂದರು.

ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ‘ವಿಶ್ವ ಸಂಸ್ಥೆಯು 2025ರ ವರ್ಷವನ್ನು ವಿಶ್ವ ಸಹಕಾರ ವರ್ಷ ಎಂದು ಘೋಷಣೆ ಮಾಡಿರುವುದು ಸಮಯೋಚಿತವಾಗಿದೆ. ಸಹಕಾರ ಕ್ಷೇತ್ರದಲ್ಲಿ ನಾಯಕತ್ವ ಬೆಳವಣಿಗೆ, ಸಾಮಾಜಿಕ ಜವಾಬ್ದಾರಿಗಳ ಹಂಚಿಕೆಗಳು ಹೆಚ್ಚಳವಾಗಿವೆ’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಹರ್ಷ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಶಂಕರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಪಿ. ಅರುಣಕುಮಾರಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.