ಮಂಡ್ಯ: ದೆಹಲಿಯ ರೈತ ಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ಭಾಗದ ನಾಲ್ಕು ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಸದಸ್ಯರು ಶುಕ್ರವಾರ ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 4 ಗಂಟೆಯವರೆಗೂ ನಡೆಯಲಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಹೆದ್ದಾರಿಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ನಿಲ್ಲಿಸಿರುವ ಕಾರಣ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಂಘಟನೆಗಳ ಮುಖಂಡರು ಬೆಳಿಗ್ಗೆ ರಸ್ತೆಯಲ್ಲೇ ತಿಂಡಿ ತಯಾರಿಸಿ ಸೇವಿಸಿದ್ದಾರೆ. ರಸ್ತೆಯಲ್ಲಿ ಜಾನುವಾರುಗಳನ್ನೂ ಕಟ್ಟಿ ಹಾಕಿದ್ದಾರೆ.
ಪ್ರತಿಭಟನೆ ಮಾಹಿತಿ ಮೊದಲೇ ತಿಳಿದಿದ್ದ ಕಾರಣ ವಾಹನಗಳು ಬದಲಿ ಮಾರ್ಗದ ಮೂಲಕ ಸಂಚಾರ ಮಾಡುತ್ತಿವೆ. ಮೈಸೂರು ಕಡೆಯಿಂದ ಬರುವ ವಾಹನಗಳು ಕೆಆರ್ಎಸ್, ಕಟ್ಟೇರಿ, ಎಲೆಕೆರೆ ಹ್ಯಾಂಡ್ಪೋಸ್ಟ್, ಪಾಂಡವಪುರ, ಮಂಡ್ಯ ಮೂಲಕ ಬೆಂಗಳೂರು ತಲುಪುತ್ತಿವೆ. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಮದ್ದೂರು, ಭಾರತೀನಗರ, ಮಳವಳ್ಳಿ, ಬನ್ನೂರು ಮಾರ್ಗದಲ್ಲಿ ಮೈಸೂರು ತಲುಪುತ್ತಿವೆ.
‘ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಜಗತ್ತಿನ ಅತೀದೊಡ್ಡ ಆಂದೋಲನವಾಗಿದ್ದು ನ.26ಕ್ಕೆ ವರ್ಷ ಪೂರೈಸಿದೆ. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಆದರೆ ರೈತ ಹೋರಾಟದಲ್ಲಿ 700 ಜನರು ಮೃತಪಟ್ಟಿದ್ದು ಅವರಿಗೆ ಪರಿಹಾರ ದೊರೆಯಬೇಕು. ಅಲ್ಲಿಯವರೆಗೂ ದೆಹಲಿಯಲ್ಲಿ ಹೋರಾಟ ಮುಂದುವರಿಯಲಿದೆ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಾವು ಸಾಂಕೇತಿಕವಾಗಿ ಒಂದು ದಿನ ಹೋರಾಟ ನಡೆಸುತ್ತಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹೋರಾಟದಲ್ಲಿ ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕೃಷ ಕೂಲಿ ಕಾರ್ಮಿಕರ ಸಂಘ, ಜನಶಕ್ತಿ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಿಐಟಿಯು ಮುಂತಾದ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.