ADVERTISEMENT

ದೇವೇಗೌಡರ ಪುತ್ರಿ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:51 IST
Last Updated 7 ಜುಲೈ 2019, 19:51 IST

ಮಂಡ್ಯ: ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ತಮ್ಮ ಆಪ್ತರ ಬಳಿ ರಾಜೀನಾಮೆಯ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಎಚ್‌.ಡಿ.ದೇವೇಗೌಡರ ಪುತ್ರಿಯೊಬ್ಬರ ಹಸ್ತಕ್ಷೇಪದಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

‘ನನ್ನ ರಾಜೀನಾಮೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಎಚ್‌.ಡಿ.ರೇವಣ್ಣ ಕಾರಣರಲ್ಲ. ಆಡಳಿತದಲ್ಲಿ ದೊಡ್ಡಗೌಡರ ಪುತ್ರಿಯೊಬ್ಬರ ಹಸ್ತಕ್ಷೇಪ ವಿಪರೀತವಾಗಿತ್ತು. ನನಗೆ ಕಿರುಕುಳ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ತಮ್ಮ ಮನೆಗೆ ಕರೆಸಿಕೊಂಡು ಡೈನಿಂಗ್‌ ಟೇಬಲ್‌ನಲ್ಲಿ ಕೂರಿಸಿಕೊಳ್ಳುತ್ತಿದ್ದರು. ನನ್ನನ್ನು ಚಪ್ಪಲಿ ಬಿಡುವ ಜಾಗದಲ್ಲಿ ಕೂರಲು ಹೇಳುತ್ತಿದ್ದರು. ಯಾವುದೇ ಅನುದಾನ ಬಂದರೆ ನನ್ನ ಗಮನಕ್ಕೆ ತಾರದೇ ನಿರ್ಧಾರ ಕೈಗೊಳ್ಳುತ್ತಿದ್ದರು. ಕ್ಷೇತ್ರದ ಜನರಿಗೆ ಉತ್ತರ ಕೊಡಲಾಗದ ಸ್ಥಿತಿ ನನ್ನದಾಗಿತ್ತು. ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

‘ಹಸ್ತಕ್ಷೇಪದ ಬಗ್ಗೆ ಕುಮಾರಸ್ವಾಮಿ ಬಳಿ ಹತ್ತಾರು ಬಾರಿ ಚರ್ಚಿಸಿದ್ದೆ. ಅವರೂ ನನ್ನ ಮನವಿ ಕೇಳಿಸಿಕೊಳ್ಳಲಿಲ್ಲ. ಅನುದಾನದ ವಿಚಾರದಲ್ಲೂ ನನ್ನ ಕ್ಷೇತ್ರಕ್ಕೆ ಅನ್ಯಾಯವಾಯಿತು. ಲೋಕಸಭಾ ಚುನಾವಣೆಗೆ ಮುನ್ನ ಜಿಲ್ಲೆಗೆ ₹ 800 ಕೋಟಿ ಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಕ್ಷೇತ್ರಕ್ಕೆ ₹100 ಕೋಟಿ ಕೊಟ್ಟರೆ, ನನ್ನ ಕ್ಷೇತ್ರಕ್ಕೆ ಕೇವಲ ₹ 2 ಕೋಟಿ ಲಭಿಸಿತು. ರಾಜೀನಾಮೆಗೆ ಇದೂ ಕಾರಣ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.