ಮಂಡ್ಯ: ‘ಸಿದ್ದರಾಮಯ್ಯನವರೇ ನೀವು ಮಾತೃಪಕ್ಷಕ್ಕೆ (ಜೆಡಿಎಸ್) ಮೋಸ ಮಾಡಿ ಹೋಗಿದ್ದೀರಾ ಎಂಬುದು ನೆನಪಿರಲಿ. ಇದು ಹೆತ್ತ ತಾಯಿಗೆ ಮಾಡಿದ ದ್ರೋಹಕ್ಕೆ ಸಮ. ನೀವು ಇಲ್ಲಿ ಉಂಡು, ತಿಂದು ಹೋದವರು ಇದೀಗ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತೀರಾ. ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದು, ನಾವು ಧೃತಿಗೆಡುವುದಿಲ್ಲ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
‘ಜೆಡಿಎಸ್ ಬೇರೆಯವರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು’ ಎಂದು ಸಿದ್ದರಾಮಯ್ಯ ಅವರು ಕೆಆರ್ಎಸ್ ಬಾಗಿನ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೆ.ಆರ್. ಪೇಟೆಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ನಿಖಿಲ್ ಪ್ರತಿಕ್ರಿಯಿಸಿದರು.
‘ಯಾರೋ ಕಟ್ಟಿದ ಪಕ್ಷದಲ್ಲಿ ನೀವು ಹೋಗಿ ಕಾಂಗ್ರೆಸ್ ಮುಖಂಡರಿಗೆ ಅಧಿಕಾರ ತಪ್ಪಿಸಿದ್ರಿ. ಅಧಿಕಾರದ ಆಸೆಗಾಗಿ ಹಲವು ದಲಿತ ನಾಯಕರನ್ನು ತುಳಿದಿದ್ದೀರಾ. ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ, ನಮ್ಮ ಕಾರ್ಯಕರ್ತರು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಇದು ನಮ್ಮ ತಾತನ (ಎಚ್.ಡಿ. ದೇವೇಗೌಡ) ಬಯಕೆ’ ಎಂದರು.
‘ಮುಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ₹2 ಸಾವಿರ ಅಲ್ಲ, ₹5 ಸಾವಿರ ಕೊಡುತ್ತೇವೆ. ನಾವು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗದಂತೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುತ್ತೇವೆ’ ಎಂದರು.
‘ನಾನು ಅಧಿಕಾರಕ್ಕಾಗಿ ಸಾರ್ವಜನಿಕ ಬದುಕಿಗೆ ಬಂದಿಲ್ಲ. ಜನಸೇವೆಗೆ ಮತ್ತು ಪಕ್ಷದ ಕಾರ್ಯಕರ್ತರ ಸೇವೆಗೆ ಬಂದಿದ್ದೇನೆ. ಮೂರು ಬಾರಿ ಸೋತಿದ್ದರೂ ಧೃತಿಗೆಟ್ಟಿಲ್ಲ, ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನನ್ನ ಮೂರು ಬಾರಿಯ ಸೋಲಿಗೆ ಏನೆಲ್ಲಾ ಪಿತೂರಿ ಮಾಡಿದ್ರಿ ಎಂಬುದು ಗೊತ್ತಿದೆ. ನಮ್ಮ ಪಕ್ಷವನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಿಲ್ಲ. ರಾಜ್ಯದಾದ್ಯಂತ 58 ದಿನಗಳ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುತ್ತೇನೆ’ ಎಂದರು.
‘ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದವರು ಸಿದ್ದರಾಮಯ್ಯ. ನಿಮ್ಮದೇ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಯಾರೆಂದು ಗೊತ್ತಿದೆ. ಅದರ ಸೂತ್ರಧಾರರು ನೀವೇ ಎಂದು ಎಲ್ಲರಿಗೂ ಗೊತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.