ADVERTISEMENT

ಅದ್ವೈತ ಆಶ್ರಮ ಎಂದೇ ಖ್ಯಾತಿ ಹಾಲ್ತಿ‌ ಆಶ್ರಮ: ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:04 IST
Last Updated 15 ಫೆಬ್ರುವರಿ 2026, 5:04 IST
ನಾಗಮಂಗಲ ತಾಲ್ಲೂಕಿನ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಲೋಕಾರ್ಪಣೆಗೊಂಡ ನೂತನ ರಾಜಗೋಪುರ 
ನಾಗಮಂಗಲ ತಾಲ್ಲೂಕಿನ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಲೋಕಾರ್ಪಣೆಗೊಂಡ ನೂತನ ರಾಜಗೋಪುರ    

ನಾಗಮಂಗಲ: ಅದ್ವೈತ ಆಶ್ರಮ ಎಂದೇ ಖ್ಯಾತಿ ಪಡೆದಿರುವ ಹಾಲ್ತಿ ಸ್ವರ್ಗಾಶ್ರಮ ಕ್ಷೇತ್ರದಲ್ಲಿ ಬಹು ಕಾಲದಿಂದ ಆಧ್ಯಾತ್ಮಿಕ ಅದ್ವೈತದ ಚಟುವಟಕೆಗಳು ನಡೆದುಕೊಂಡು ಬಂದಿವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದಲ್ಲಿರುವ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಮಹಾಕುಂಭಾಭಿಷೇಕ ಸಮಾರಂಭದ ಸಾನ್ನಿಧ್ಯ ವಹಿಸಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

‘ಹಾಲ್ತಿ ಸ್ವರ್ಗಾಶ್ರಮದ ಅಮರಾನಂದ ಶ್ರೀಗಳು ಇಲ್ಲಿ ನೆಲೆಸಿದ್ದ ವೇಳೆ ಸಣ್ಣದಾದ ದೇವಸ್ಥಾನ ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಇದನ್ನು ಮನಗಂಡ ಭೈರವೈಕ್ಯ ಬಾಲಗಂಗಾಧನಾಥ ಶ್ರೀಗಳು ಶ್ರೀಮಠದಿಂದ ಏನೆಲ್ಲಾ ಅಗತ್ಯವಿದೆಯೋ ಅವೆಲ್ಲವನ್ನೂ ಕೊಂಡೊಯ್ದು ಹಾಲ್ತಿ ಸ್ವರ್ಗಾಶ್ರಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಎಂದು ಸಲಹೆ ನೀಡಿದ್ದರು ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಸ್ವರ್ಗಾಶ್ರಮ ಹಾಲ್ತಿ ಕ್ಷೇತ್ರದ ಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯು ಇತಿಹಾಸ ಹೊಂದಿರುವ ಪುರಾತನ ಪುಣ್ಯ ಕ್ಷೇತ್ರವಾಗಿದೆ. ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಅತ್ಯಂತ ಅಭಿಮಾನದಿಂದ ಈ ಧಾರ್ಮಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಧಾರ್ಮಿಕ ಕ್ಷೇತ್ರ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು. ಆದಿಚುಂಚನಗಿರಿಯ ಸ್ವರ್ಗಾಶ್ರಮ ಹಾಲ್ತಿ ಹಾಗೂ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.

ಇದಕ್ಕೂ ಮೊದಲು ಹೋಮ ಹವನಾದಿ ಪೂಜಾ ಕೈಂಕರ್ಯಗಳು ಜರುಗಿದವು. ಹೋಮಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದ ನಂತರ ಶ್ರೀಗಳು ರಾಜಗೋಪುರ ಹಾಗೂ ಮಲ್ಲಿಕಾರ್ಜುನಸ್ವಾಮಿ ರಥವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಸುತ್ತ ಮುತ್ತಲ ಗ್ರಾಮಗಳಿಂದ52 ಗ್ರಾಮದೇವತೆಗಳ ಉತ್ಸವ ಮೂರ್ತಿಗಳನ್ನು ಕರೆತರಲಾಗಿತ್ತು.

ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಜಿ.ಆದರ್ಶ, ತಾಪಂ ಇ ಓ ಸತೀಶ್ ಹಾಗೂ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು  ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.