
ಪಾಂಡವಪುರ: ಪಟ್ಟಣದ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ, ವಾಣಿಜ್ಯ ಮಳಿಗೆ ಮರು ಹರಾಜು, ಸಂತೆ ಮೈದಾನದಲ್ಲಿ ಸುಸಜ್ಜಿತ ಮಾರುಕಟ್ಟೆ, ಕಲಾಮಂದಿರ, ಗ್ರಂಥಾಲಯ ಕಟ್ಟಡಕ್ಕೆ ಜಾಗ, ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ, ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಹಾರೋಹಳ್ಳಿ ಬಳಿ 6 ಎಕರೆ 15 ಗುಂಟೆ ಜಮೀನಿನಲ್ಲಿ 178 ಮಂದಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗಿದೆ. ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ ಮಾನದಂಡಗಳ ಅನುಸಾರ ನಿವೇಶ ಹಂಚಿಕೆ ಮಾಡಲಾಗುವುದು. ನಿವೇಶನ ಹಂಚಿಕೆಗೂ ಮುನ್ನ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದಾಗ ಹೇಮಾವತಿ ನೀರಾವರಿ ಕಚೇರಿ ಹಿಂಭಾಗದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ 30 ಎಕರೆ ಜಾಗ ಗುರುತಿಸಿ ಸರ್ಕಾರದೊಂದಿಗೆ ನಡಾವಳಿ ನಡೆಸಿದ್ದರು. ಇದು ಸೇರಿ ಪಟ್ಟಣದ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿರುವ ಜಮೀನು ಹಾಗೂ ಒತ್ತುವರಿಯಾಗಿರುವ ಗೋಮಾಳವನ್ನು ಗುರುತಿಸಿ ಅದನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ಸರ್ಕಾರದಿಂದ ಅನುಮತಿ ಪಡೆದು ಮತ್ತಷ್ಟು ನಿವೇಶನ ರಹಿತರಿಗೆ ನಿವೇಶನ ಹಂಚಲಾಗುವುದು ಎಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಈಗಿರುವ ಕ್ರೀಡಾಂಣಗದ ಜತೆಗೆ ಹೊರವಲಯದಲ್ಲಿ ಮತ್ತೊಂದು ಕ್ರೀಡಾಂಗಣ ನಿರ್ಮಾಣ, ಕಲಾಮಂದಿರಕ್ಕೆ ಜಾಗ, ಗ್ರಂಥಾಲಯ ಕಟ್ಟಡಕ್ಕೆ ಜಾಗ ಒದಗಿಸುವುದು, ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣ ಹಾಗೂ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು, ಹರಾಜಿನಲ್ಲಿ ಮಳಿಗೆಗಳನ್ನು ಪಡೆದವರು ಬೇರೊಬ್ಬರಿಗೆ ಬಾಡಿಗೆಗೆ ನೀಡಿದರೆ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದರು.
₹70 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ: ₹ 70 ಕೋಟಿ ವೆಚ್ಚದಲ್ಲಿ ಈಗಿರುವ ಸಂತೆ ಮೈದಾನ ಅಭಿವೃದ್ಧಿ ಹಾಗೂ ಹೊಸ ಮಾರುಕಟ್ಟೆ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಕೆಯುಐಡಿಎಫ್ಸಿಯಲ್ಲಿ ಶೇ 70ರಷ್ಟು ಹಣಕಾಸು ನೆರವು ಪಡೆಯಲಾಗುವುದು. ಉಳಿದ ಶೇ 30ರಷ್ಟು ಹಣವನ್ನು ಪುರಸಭೆ ಭರಿಸಬೇಕೋ, ಸರ್ಕಾರದಿಂದ ಅನುದಾನ ತರಬಹುದೇ ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ಪುರಸಭೆ ನಾಮಿನಿ ಸದಸ್ಯ ಎಚ್.ಎಲ್.ಮುರುಳೀಧರ್ ಮಾತನಾಡಿ, ಇಲ್ಲಿನ ಅಧಿಕಾರಿಗಳು ನಾಮಿನಿ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ನಾವು ಸರ್ಕಾರದ ಪ್ರತಿನಿಧಿಗಳಾಗಿದ್ದೇವೆ ಎಂಬ ಅರಿವು ಇವರಿಗಿಲ್ಲ. ಪುರಸಭೆ ಆಸ್ತಿಗಳ ಮೇಲೆ ನ್ಯಾಯಾಲಯದಲ್ಲಿರುವ ಪ್ರಕರಣಗಳು ಎಷ್ಟಿವೆ? ಅವು ಯಾವ ಹಂತದಲ್ಲಿವೆ? ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ನಾಮಿನಿ ಸದಸ್ಯರಾದ ಹಾರೋಹಳ್ಳಿ ರಮೇಶ್, ಲಕ್ಷ್ಮೇಗೌಡ, ಸೋಮಶೇಖರ್, ಕಚೇರಿ ವ್ಯವಸ್ಥಾಪಕಿ ಮಂಜುಳಾ, ಎಂಜಿನಿಯರ್ಗಳಾದ ಯಶಸ್ವಿನಿ, ಚೌಡಪ್ಪ, ಸಿಬ್ಬಂದಿ ಮಣಿಪ್ರಸಾದ್, ನಾಗೇಶ್, ಮಹೇಶ್, ನರಸಿಂಹ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.