ಮಂಡ್ಯ: ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ ಮತ್ತು ಹಣ ದುರುಪಯೋಗ ಮಿತಿ ಮೀರಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆರು ತಿಂಗಳಲ್ಲಿ 6 ಪಿಡಿಒಗಳನ್ನು (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಅಮಾನತುಗೊಳಿಸುವ ಮೂಲಕ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕರ್ತವ್ಯಲೋಪ ಎಸಗಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಕಾನೂನುಬದ್ಧವಾಗಿ ಮತ್ತು ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎಂಬ ಸಂದೇಶವನ್ನು ಸಿಇಒ ರವಾನಿಸಿದ್ದಾರೆ.
ಆರೋಪ ಮತ್ತು ದೂರು ಕೇಳಿಬಂದ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಿ ತನಿಖೆ ಮಾಡಿಸಿ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ವರದಿಯಾಗಿರುವ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ (ಡಿ.ಇ) ಕಾಯ್ದಿರಿಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿದ್ದಾರೆ.
ಅಕ್ರಮವಾಗಿ ಇ–ಖಾತೆ: ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.87ರಲ್ಲಿ ವಜ್ರ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಬಹುನಿವೇಶನಗಳ ವಿನ್ಯಾಸದ ಬಡಾವಣೆಯಲ್ಲಿ ಹಂಚಿಕೆಯಾಗಿರುವ 139 ನಿವೇಶನಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ. ಸಭಾ ನಿರ್ಣಯದ ವಿರುದ್ಧ ಇ–ಖಾತೆ ಮಾಡಲು ಪಿಡಿಒ ಅವಕಾಶ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇ-ಸ್ವತ್ತು ತಂತ್ರಾಂಶದಲ್ಲಿ ಸದರಿ ಬಡಾವಣೆಯ ಖಾತೆಗಳನ್ನು ದಾಖಲಿಸಿ ವಿತರಣೆ ಮಾಡುವ ಮೂಲಕ ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಆರೋಪದ ಮೇರೆಗೆ ಪಿಡಿಒ ಎಂ.ಕೆ. ಅನಿತಾ ರಾಜೇಶ್ವರಿ ಅವರನ್ನು ಏಪ್ರಿಲ್ ತಿಂಗಳಲ್ಲಿ ಸಿಇಒ ಕೆ.ಆರ್. ನಂದಿನಿ ಅಮಾನತುಗೊಳಿಸಿದ್ದರು.
ಇ-ಸ್ವತ್ತು ವಿತರಣೆಯಲ್ಲಿ ಕರ್ತವ್ಯಲೋಪ ಎಸಗಿದ ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ ವಿಶಾಲಮೂರ್ತಿ ಮತ್ತು ಹಾಲಿ ಪಿಡಿಒ ಯೋಗೇಶ್ ಇಬ್ಬರನ್ನು ಮೇ ತಿಂಗಳಲ್ಲಿ ಅಮಾನತುಗೊಳಿಸಲಾಗಿದೆ.
ಪಿಡಿಒ ಲೋಕಾಯುಕ್ತ ಬಲೆಗೆ!
ಸಾರ್ವಜನಿಕರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಸೈಯದ್ ಮುಜಾಕಿರ್ ಅವರನ್ನು ಆಗಸ್ಟ್ನಲ್ಲಿ ಅಮಾನತುಗೊಳಿಸಲಾಗಿತ್ತು.
ತನಿಖಾ ತಂಡ ರಚನೆ: ನರೇಗಾದಡಿ ರಸ್ತೆ ಬದು ನೆಡು ತೋಪು ಯೋಜನೆಯಲ್ಲಿ ಕಾಮಗಾರಿ ನಡೆಸದೇ ಹಣ ಪಾವತಿಸಿರುವ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದ್ದು, ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಹಾಗೂ ಹೊಗುತ್ತಿಗೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಇಒ ನಂದಿನಿ ತಿಳಿಸಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯಲ್ಲಿ ನಿಯಮಬಾಹಿರವಾಗಿ ಮತ್ತು ಕೆಟಿಪಿಪಿ ಉಲ್ಲಂಘನೆ ಮಾಡಿ ಸುಮಾರು ₹26 ಲಕ್ಷ ದುರುಪಯೋಗ ಮಾಡಿರುವ ಆರೋಪದ ಮೇರೆಗೆ ಅಕ್ಟೋಬರ್ 10ರಂದು ಪಿಡಿಒ ಸುವರ್ಣ ಧರಣ್ಣನವರ್ ಅವರನ್ನು ಸಿಇಒ ಅಕ್ಟೋಬರ್ 10ರಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ. 2025–26ನೇ ಸಾಲಿನಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಸಾಮಗ್ರಿಗಳ ಖರೀದಿಗೆ ಬಿಲ್ ಪಾವತಿಸಿರುವ ಬಾಬ್ತಿನ ವಿಚಾರವಾಗಿ ಸಾಮಗ್ರಿ ಖರೀದಿಸದೇ ₹97300 ಬಿಲ್ ಪಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪಿಡಿಒ ಅವರು ಸ್ವತಃ ಅಧಿಕಾರಿಗಳ ಸಮ್ಮುಖದಲ್ಲಿಯೇ ಒಪ್ಪಿಕೊಂಡಿದ್ದಾರೆ. 2024–25 ಹಾಗೂ 2025–26ನೇ ಸಾಲಿನಲ್ಲಿ ವರ್ಗ–2ರಲ್ಲಿ ಯಾವುದೇ ಕ್ರಿಯಾ ಯೋಜನೆ ಇಲ್ಲದೇ ವೆಚ್ಚ ಮಾಡಿರುವುದು ಕಂಡುಬಂದಿರುತ್ತದೆ. ಒಟ್ಟು ₹26 ಲಕ್ಷ ವೆಚ್ಚದ ಸಾಮಗ್ರಿ ಖರೀದಿಸಿದ್ದು ವೋಚರ್ ದಾಸ್ತಾನು ಮತ್ತು ವಿತರಣಾ ಸಹಿ ಪರಿಶೀಲಿಸಿದಾಗ ನಿಯಮಾನುಸಾರ ನಿರ್ವಹಿಸದಿರುವುದು ಕಂಡುಬಂದಿದೆ.
ನಾಗಮಂಗಲ ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓಂಕಾರಪ್ಪ ಎಸ್.ಆರ್. ಅವರು ₹25 ಲಕ್ಷ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಸಿಇಒ ಅವರು ಅಮಾನತುಗೊಳಿಸಿದ್ದಾರೆ. 15ನೇ ಹಣಕಾಸು ಯೋಜನೆಯಲ್ಲಿ 2024–25ನೇ ಸಾಲಿನ ₹9.61 ಲಕ್ಷ ಮತ್ತು 2025–26ನೇ ಸಾಲಿನ ₹15.71 ಲಕ್ಷವನ್ನು ಗ್ರಾ.ಪಂ. ದಾಖಲೆಯಂತೆ ಮತ್ತು ತಂತ್ರಾಂಶದಲ್ಲಿ ನಮೂದಿಸಿರುವ ಮೊತ್ತಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಬಳಕೆ ಆಗಿಲ್ಲವಾದ್ದರಿಂದ ಈ ಹಣ ದುರುಪಯೋಗವಾಗಿರುವುದು ಕಂಡುಬಂದಿದೆ. ಪಿಡಿಒ ಡಾಂಗಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಅವರ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಅಕ್ರಮಗಳಿಗೆ ಆಸ್ಪದ ಕೊಡದಂತೆ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಲು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದೇನೆ.–ಕೆ.ಆರ್.ನಂದಿನಿ, ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.