ಮನೆ ಗೋಡೆ ಮೇಲೆ ಅಂಟಿಸಿರುವ ನೋಟಿಸ್ ಪ್ರತಿ
ಮಳವಳ್ಳಿ(ಮಂಡ್ಯ): ತಾಲ್ಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ಸಕಾಲಕ್ಕೆ ಸಾಲ ಮರುಪಾವತಿ ಮಾಡದ ಕಾರಣ ಮನೆಯನ್ನು ಮುಟ್ಟಗೋಲು ಹಾಕಿಕೊಳ್ಳಲಾಗುವುದು ಎಂದು ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ನೋಟಿಸ್ ಜಾರಿ ಮಾಡಿದೆ.
ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕೆ. ವೆಂಕಟೇಶ್ ಮತ್ತು ರತ್ನಮ್ಮ ಅವರು ಮನೆ ನಿರ್ಮಾಣಕ್ಕೆ ಮಣಪ್ಪುರಂ ಹೋಮ್ ಫೈನಾನ್ಸ್ನಿಂದ ₹8.50 ಲಕ್ಷ ಸಾಲ ಪಡೆದು ಹಲವು ಕಂತುಗಳನ್ನು ಕಟ್ಟಿದ್ದಾರೆ. ಈ ನಡುವೆ ವೆಂಕಟೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಕಳೆದ 7 ತಿಂಗಳಿನಿಂದ ಹಣ ಪಾವತಿ ಮಾಡಿಲ್ಲ. ಹೀಗಾಗಿ ಬಡ್ಡಿ ಸೇರಿದಂತೆ ಸುಮಾರು ₹8 ಲಕ್ಷ ಹಣ ಕಟ್ಟುವಂತೆ ತಾಕೀತು ಮಾಡಿದ್ದಾರೆ.
‘ಹಣ ಕಟ್ಟದಿದ್ದರೆ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ನೋಟಿಸ್ ಅನ್ನು ಮನೆ ಮುಂದೆ ಅಂಟಿಸಿದ್ದಾರೆ’ ಎಂದು ರತ್ನಮ್ಮ ದೂರಿದರು.
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಟರಾಜು ನೊಂದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ನಂತರ ಅವರು ಮಾತನಾಡಿ, ‘ತಾಲ್ಲೂಕಿನ ಕೊನ್ನಾಪುರ ಹಾಗೂ ಮಲಿಯೂರು ಗ್ರಾಮಗಳಲ್ಲಿ ಖಾಸಗಿ ಫೈನಾನ್ಸ್ ಕಿರುಕುಳದಿಂದ ಮೂವರು ಸಾವನ್ನಪ್ಪಿದ್ದಾರೆ. ಇಂಥ ಸಂದರ್ಭದಲ್ಲಿ ಇದೀಗ ಮತ್ತೊಂದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಾಲ ಪಾವತಿಗೆ ಕಾಲಾವಕಾಶ ಕೊಡಿಸುವುದರೊಂದಿಗೆ ಹೆಚ್ಚುವರಿ ಬಡ್ಡಿಯನ್ನು ಕಡಿತಗೊಳಿಸಿ ಆ ಕುಟುಂಬದ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.