ಮಂಡ್ಯ: ಶಾಂತಿ ಕದಡುವ ಹೇಳಿಕೆ ನೀಡುತ್ತಿರುವ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಜಿಲ್ಲೆ ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಲಾವಿದರು, ವಿದ್ಯಾರ್ಥಿಗಳು ಮಂಗಳವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಸರ್ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಕ್ಕರೆ ಜಿಲ್ಲೆಯು ಶಾಂತಿ, ಸುವ್ಯವಸ್ಥೆ, ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್ ಹಾಗು ಋಷಿಕುಮಾರ ಸ್ವಾಮೀಜಿ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಜಿಲ್ಲೆಯಲ್ಲಿ ನೆಲೆಯಾಗಿರುವ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಮುಂದೆ ಅವರು ಶಾಶ್ವತವಾಗಿ ಜಿಲ್ಲೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲೆ ಕೃಷಿ ಪ್ರಧಾನವಾಗಿದ್ದು ರೈತರು, ದಲಿತರು, ಮುಸಲ್ಮಾನರು, ಬೌದ್ಧರು ಮತ್ತು ಕ್ರೈಸ್ತರು ಯಾವುದೇ ಭೇದ ಭಾವವಿಲ್ಲದೆ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಈ ಸೌಹಾರ್ದ ಕದಡಲು ಯತ್ನಿಸುತ್ತಿರುವುದು ಅಪಾಯಕಾರಿ. ಹೊರಗಿನಿಂದ ಬಂದ ಋಷಿಕುಮಾರ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ಧರ್ಮ ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆ ಕೊಡುತ್ತಿದ್ದಾರೆ. ಯುವಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರು ಮುಂದೆ ಜಿಲ್ಲೆಗೆ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಕೋಮುಗಲಭೆಗಳು ನಡೆದಿಲ್ಲ. ರೈತ ಮತ್ತು ದಲಿತ ಸಂಘಟನೆಗಳು ಹಾಗೂ ಕೃಷಿ ಕೂಲಿಕಾರ್ಮಿಕರ ಸಂಘಟನೆಗಳಲ್ಲದೆ ಎಲ್ಲಾ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಮಂಡ್ಯ ಜಿಲ್ಲೆಯ ಈ ಭಾತೃತ್ವ, ಸಂಸ್ಕೃತಿ, ಪರಂಪರೆಯನ್ನು ಸದಾ ಎತ್ತಿ ಹಿಡಿದಿದ್ದಾರೆ. ಹಾಗೆಯೇ ಜಾತಿ ಗಲಭೆಗಳನ್ನೂ ತಡೆಗಟ್ಟುವಲ್ಲಿ ಇಲ್ಲಿನ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಮುಖಂಡರು ಜಾಗ್ರತೆ ವಹಿಸಿ ಶಾಂತಿ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಾತಾವರಣ ಮುಂದೆಯೂ ಮುಂದುವರಿಯಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.
ಚಿಕ್ಕಮಗಳೂರಿನ ಕಾಳಿಮಠದ ಋಷಿಕುಮಾರಸ್ವಾಮಿ, ಹುಬ್ಬಳ್ಳಿಯ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಜಾಮಿಯಾ ಮಸೀದಿಯ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ. ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಮೂಲಕ ಹೋಗಿ ಮಸೀದಿ ಇರುವ ಜಾಗದಲ್ಲಿ ಆಂಜನೇಯನ ಪೂಜೆ ಮಾಡಲಾಗುವುದು ಎಂದು ಹೇಳಿಕೆ ನೀಡಿರುವ ಋಷಿಕುಮಾರ ಸ್ವಾಮೀಜಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಸಮಾನ ಮನಸ್ಕ ವೇದಿಕೆಯ ಹುಲ್ಕೆರೆ ಮಹಾದೇವು, ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ಜಿ.ಟಿ.ವೀರಪ್ಪ, ಸಿ.ಎಂ.ದ್ಯಾವಪ್ಪ, ಕೆಂಪೂಗೌಡ, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಎಂ.ಬಿ.ನಾಗಣ್ಣಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.