ADVERTISEMENT

ಮಂಡ್ಯ | ಮಹಿಳೆಗೆ ಬಹಿಷ್ಕಾರ: ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 5:57 IST
Last Updated 6 ಜನವರಿ 2026, 5:57 IST
ಮಹಿಳೆ ಮೇಲೆ ಹಲ್ಲೆ ಮತ್ತು ಬಹಿಷ್ಕಾರ ಮಾಡಿದ ಕ್ರಮ ಖಂಡಿಸಿ ಕರ್ನಾಟಕ ಸಂವಿಧಾನ ಸೇನೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ ವಾರಿಯರ್ಸ್‌ ಸಂಘಟನೆಯ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಮಹಿಳೆ ಮೇಲೆ ಹಲ್ಲೆ ಮತ್ತು ಬಹಿಷ್ಕಾರ ಮಾಡಿದ ಕ್ರಮ ಖಂಡಿಸಿ ಕರ್ನಾಟಕ ಸಂವಿಧಾನ ಸೇನೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ ವಾರಿಯರ್ಸ್‌ ಸಂಘಟನೆಯ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ಮಹಿಳೆ ಮೇಲೆ ಹಲ್ಲೆ ನಡೆಸಿ, ಬಹಿಷ್ಕಾರ ಹಾಕಿರುವ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂವಿಧಾನ ಸೇನೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ ವಾರಿಯರ್ಸ್‌ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ವ್ಯಕ್ತಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು.

‘ಕಚ್ಚಿಗೆರೆ ಗ್ರಾಮದ ಎಂ.ರಜಿನಿ ಹಲ್ಲೆಗೊಳಗಾಗಿರುವ ಮಹಿಳೆ. ಇವರು ರೈತ ಭೋಜರಾಜು ಅವರ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆ ಕಟಾವಿಗೆ ಬಂದಿತ್ತು. ಸಾಗಾಣಿಕೆ ಮಾಡಲು ನಮ್ಮೂರಿನ ಸವರ್ಣೀಯರ ರೈತರ ಬಳಿ ಹೋಗಿ ಎತ್ತಿನ ಗಾಡಿಯನ್ನು ಬಾಡಿಗೆಗೆ ಕರೆದವು. ಆದರೆ ಅವರು ಬರಲಿಲ್ಲ. ಅದಕ್ಕೆ ನಾವು ಪಕ್ಕದ ಗ್ರಾಮದ ಕೀಲಾರದ ರೈತರೊಬ್ಬರ ಎತ್ತಿನ ಗಾಡಿಯಲ್ಲಿ ಜ.3ರಂದು ಸಾಗಾಣಿಕೆ ಮಾಡುವಾಗ, ಬೆಟ್ಟೇಗೌಡ ಮತ್ತು ಶಿವಣ್ಣ ಹಾಗೂ ಇತರರು ಎತ್ತಿನ ಗಾಡಿ ತಡೆದು ಜಗಳ ಮಾಡಿದರು’ ಎಂದು ಆರೋಪಿಸಿದರು.

ADVERTISEMENT

‘ಸ್ವಲ್ಪ ಸಮಯದ ನಂತರ ದಾರಿಗೆ ಅಡ್ಡಲಾಗಿ ಹಾಕಿದ್ದ ಮರದ ದಿಮ್ಮಿಗಳು ಹಾಗೂ ಮುಳ್ಳಿನ ಗಿಡಗಳನ್ನು ಕಷ್ಟಪಟ್ಟು ಪಕ್ಕಕ್ಕೆ ಸರಿಸಿ ಭತ್ತದ ಫಸಲು ತುಂಬಿದ ಗಾಡಿಯನ್ನು ಒಕ್ಕಣೆ ಮಾಡುವ ಸ್ಥಳಕ್ಕೆ ತರಲಾಯಿತು. ಅಲ್ಲಿಗೂ ಬಂದ ಬೆಟ್ಟೇಗೌಡ ಹಾಗೂ ಇತರರು ಒಕ್ಕಣೆ ಮಾಡಲು ಅವಕಾಶ ನೀಡುವುದಿಲ್ಲವೆಂದು ಜಗಳವಾಡಿದರು. ನಂತರ ಮೈಮೇಲಿನ ಬಟ್ಟೆ ಹರಿದು, ಅತ್ಯಾಚಾರಕ್ಕೆ ಯತ್ನಿಸಿ, ಜಾತಿ ನಿಂದನೆ ಮಾಡಿ, ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಎಚ್‌.ಎನ್‌. ನರಸಿಂಹಮೂರ್ತಿ, ಗಂಗರಾಜು, ಕೃಷ್ಣ, ಅನ್ನದಾನಿ ಸೋಮನಹಳ್ಳಿ, ಪ್ರದೀಪ್‌ ಬಿ.ಹೊಸಹಳ್ಳಿ, ಕುಮಾರ್, ಮೋಹನ್‌, ಕೇಶವಮೂರ್ತಿ, ಉಮೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.