ADVERTISEMENT

2 ಲಕ್ಷ ಪಂಪ್‌ಸೆಟ್‌ಗಳಿಗೆ ವರ್ಷದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ: ಸಚಿವ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 12:07 IST
Last Updated 7 ಜನವರಿ 2025, 12:07 IST
<div class="paragraphs"><p>ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ </p></div>

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

   

ಮಂಡ್ಯ: ‘ಅಕ್ರಮ– ಸಕ್ರಮ ಯೋಜನೆಯಡಿ ಸಲ್ಲಿಕೆಯಾಗಿದ್ದ 4.5 ಲಕ್ಷ ಅರ್ಜಿಗಳಲ್ಲಿ 2.5 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ಬಾಕಿ 2 ಲಕ್ಷ ಪಂಪ್‌ಸೆಟ್‌ಗಳಿಗೆ ಒಂದು ವರ್ಷದೊಳಗೆ ಮೂಲಸೌಕರ್ಯ ಕಲ್ಪಿಸಿ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಅಕ್ರಮ–ಸಕ್ರಮ ಯೋಜನೆಗೆ ನಮ್ಮ ಸರ್ಕಾರ ಒಂದು ಸಾವಿರ ಕೋಟಿ ಹಣ ಮೀಸಲಿಟ್ಟಿತ್ತು. ಮತ್ತೆ ಹೊಸದಾಗಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. 

ADVERTISEMENT

ಗ್ರಿಡ್‌ನಿಂದ 500 ಮೀಟರ್‌ ಒಳಗೆ ಇರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತೇವೆ. 500 ಮೀಟರ್‌ಗಿಂತ ದೂರವಿರುವ ಪಂಪ್‌ಸೆಟ್‌ಗಳಿಗೆ ‘ಸೋಲಾರ್‌ ಸಂಪರ್ಕ’ ಕಲ್ಪಿಸುತ್ತೇವೆ. ಇದಕ್ಕೆ ರಾಜ್ಯ ಸರ್ಕಾರ ಶೇ 50ರಷ್ಟು ಮತ್ತು ಕೇಂದ್ರ ಸರ್ಕಾರ ಶೇ 30ರಷ್ಟು ಸಹಾಯಧನ ನೀಡುತ್ತದೆ. ಶೇ 20ರಷ್ಟು ಹಣವನ್ನು ರೈತರು ಭರಿಸಬೇಕು ಎಂದು ಹೇಳಿದರು.

ಶರಾವತಿಯಲ್ಲಿ ಪಂಪ್ಡ್‌ ಸ್ಟೋರೇಜ್‌: 

‘ಶರಾವತಿ ಜಲಾಶಯದಲ್ಲಿ ‘ಪಂಪ್ಡ್‌ ಸ್ಟೋರೇಜ್‌’ ಎಂಬ ವಿನೂತನ ಯೋಜನೆ ಜಾರಿಗೊಳಿಸಿ, ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದಿಸಲು ಉದ್ದೇಶಿಸಲಾಗಿದೆ. ಹರಿಯುವ ನೀರನ್ನು ಮೋಟರ್‌ ಪಂಪ್‌ಗಳ ಮೂಲಕ ಮೇಲಕ್ಕೆ ಹರಿಸಿ ಮತ್ತೆ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು. ₹9 ಸಾವಿರ ಕೋಟಿ ಯೋಜನೆ ಇದಾಗಿದ್ದು, ಪರಿಸರ ಇಲಾಖೆ ಅನುಮತಿ ಪಡೆಯಲು ಕೆ.ಪಿ.ಟಿ.ಸಿ.ಎಲ್‌.ನಿಂದ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು. 

ಹೆಚ್ಚುವರಿ 2 ಗಂಟೆ ವಿದ್ಯುತ್‌:

ಮಂಡ್ಯ ಜಿಲ್ಲೆಯಲ್ಲಿ 1,15,794 ಕೃಷಿ ಪಂಪ್‌ಸೆಟ್‌ಗಳಿವೆ. ಪ್ರಸ್ತುತ 7 ಗಂಟೆ ವಿದ್ಯುತ್‌ ನೀಡುತ್ತಿದ್ದು, ಬೇಸಿಗೆ ಬೆಳೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 2 ಗಂಟೆ ವಿದ್ಯುತ್‌ ನೀಡಬೇಕು ಎಂದು ರೈತರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಮತ್ತು ಸ್ಯಾಟಲೈಟ್‌ನಿಂದ ಈಗಾಗಲೇ ರಾಜ್ಯದ ವಿವಿಧ ಭಾಗಗಳ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದರು. 

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಮಾತನಾಡಿ, ‘ಕಳೆದ ಬಾರಿ ಹೊರ ರಾಜ್ಯಗಳಲ್ಲಿ ವಿದ್ಯುತ್‌ ಲಭ್ಯವಿರಲಿಲ್ಲ. ಪ್ರತಿ ಯುನಿಟ್‌ಗೆ ₹10ರ ದರದಲ್ಲಿ ವಿದ್ಯುತ್‌ ಖರೀದಿಸಿದ್ದೆವು. ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳಲ್ಲೂ ನೀರು ಸಂಗ್ರಹವಾಗಿದೆ. ಬೇಸಿಗೆಯಲ್ಲಿ (ಮಾರ್ಚ್‌ ಮತ್ತು ಏಪ್ರಿಲ್‌) ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ಗೆ ಹೆಚ್ಚುವರಿ ಬೇಡಿಕೆಯಿದೆ. ಅಗತ್ಯಬಿದ್ದರೆ ಪ್ರತಿ ಯುನಿಟ್‌ಗೆ ₹6 ದರದಲ್ಲಿ ವಿದ್ಯುತ್‌ ಖರೀದಿ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

ಡಿನ್ನರ್‌ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಸಾಧ್ಯವಿಲ್ಲ?
ಮಂಡ್ಯ: ‘ಡಿನ್ನರ್ ಪಾರ್ಟಿ ಮಾಡೋದ್ರಲ್ಲಿ ತಪ್ಪಿಲ್ಲ ಅಂತ ಈಗಾಗಲೇ ಸಿಎಂ ಹೇಳಿದ್ದಾರೆ. ನಾವೇನು ಬೇರೆಯವ್ರಿಗೆ ಊಟ ಕೊಡ್ತಿದ್ದೀವಾ? ನಮ್ಮ ಮಂತ್ರಿಗಳಿಗೆ ನಾವು ಊಟ ಕೊಡ್ತಿದ್ದೀವಿ ಅಷ್ಟೇ. ಡಿನ್ನರ್ ಪಾರ್ಟಿಯಲ್ಲಿ ಸಿಎಂ ಬದಲಾವಣೆ ಮಾಡಲು ಆಗಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.  ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘60% ಕಮಿಷನ್ ಆರೋಪವನ್ನು ಬಿಜೆಪಿಯವರು ಆಧಾರವಿಲ್ಲದೆ ಮಾಡುತ್ತಿದ್ದಾರೆ. ಪೆನ್‌ಡ್ರೈವ್‌ ಇದೆ ಅಂದ್ರು, ಆದ್ರೆ ಅದನ್ನ ಬಿಡುಗಡೆ ಮಾಡಲೇ ಇಲ್ಲ. ನಾವು ಅವರ ಮೇಲೆ 40% ಕಮಿಷನ್‌ ಆರೋಪ ಮಾಡ್ಲಿಲ್ಲ. ಕಂಟ್ರಾಕ್ಟರ್ ಸಂಘದ ಅಧ್ಯಕ್ಷರು ಮಾಡಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.