ಶ್ರೀರಂಗಪಟ್ಟಣ: ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಯ ಬಿಟ್ಟಿದ್ದು, ನದಿಯಲ್ಲಿ ನೀರಿನ ಸೆಳೆತ ಉಂಟಾಗಿರುವುದರಿಂದ ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಶನಿವಾರ ಬೆಳಿಗ್ಗೆಯಿಂದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
‘ಪಕ್ಷಿಧಾಮದ ಬಳಿ ನದಿಯ ನೀರಿನ ಮಟ್ಟ ಭಾನುವಾರ ರಾತ್ರಿಯಿಂದ ತುಸು ಏರಿಕೆಯಾಗಿದೆ. ಹಾಗಾಗಿ ಎಲ್ಲ 18 ದೋಣಿಗಳ ವಿಹಾರವನ್ನೂ ನಿಲ್ಲಿಸಲಾಗಿದೆ. ನದಿಯಲ್ಲಿ ಸುಮಾರು 10 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ದೋಣಿಗಳನ್ನು ಸುಗಮವಾಗಿ ನಡೆಸಲು ಆಗುವುದಿಲ್ಲ. ಹಾಗಾಗಿ ದೋಣಿಗಳನ್ನು ದಡದಲ್ಲಿ ಕಟ್ಟಿ ಹಾಕಿದ್ದೇವೆ. ನದಿಯಲ್ಲಿ ನೀರಿನ ಮಟ್ಟ ಇಳಿಕೆ ಆಗುವವರೆಗೆ ದೋಣಿ ವಿಹಾರ ಆರಂಭಿಸುವುದಿಲ್ಲ’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದರು.
ಪಕ್ಷಿಧಾಮಕ್ಕೆ ಪ್ರತಿ ದಿನ 500ರಿಂದ 600 ಮಂದಿ ಹಾಗೂ ವಾರದ ಕೊನೆ ಮತ್ತು ರಜಾ ದಿನಗಳಲ್ಲಿ 800ರಿಂದ 1,000 ಮಂದಿ ಪಕ್ಷಿಪ್ರಿಯರು ಭೇಟಿ ನೀಡುತ್ತಾರೆ. ಹೀಗೆ ಬರುವವರ ಪೈಕಿ ಶೇ 80ರಷ್ಟು ಮಂದಿ ದೋಣಿ ವಿಹಾರ ನಡೆಸುತ್ತಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.