
ಮದ್ದೂರಿನ ರೇಣುಕಾ ಯಲ್ಲಮ್ಮ ದೇವಿ
ಮದ್ದೂರು (ಮಂಡ್ಯ ಜಿಲ್ಲೆ): ಪಟ್ಟಣದ ಹೊಳೆ ಬೀದಿಯಲ್ಲಿರುವ ರೇಣುಕಾ ಯಲ್ಲಮ್ಮದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 27ನೇ ವರ್ಷದ ಮಹಾಚಂಡಿಕಾ ಹೋಮದ ಕಾರ್ಯಕ್ರಮಗಳು ಜ.31ರಿಂದ ಫೆ.2ರವರೆಗೆ ಮೂರು ದಿನ ನಡೆಯಲಿವೆ.
ಜ.31ರಂದು ಗಣಪತಿ ಪೂಜೆ, ಕಳಶ ಸ್ಥಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಫೆ.1ರಂದು ಬೆಳಿಗ್ಗೆ 8.30ಕ್ಕೆ ಮಹಾಚಂಡಿಕಾಯಾಗ ಆರಂಭವಾಗಲಿದ್ದು, ಬೆಳಿಗ್ಗೆ 11.30ಕ್ಕೆ ಮಹಾಪೂರ್ಣಾಹುತಿ ನಂತರ ಸುಹಾಸಿನಿ ಆರಾಧನೆ ಹಾಗೂ ಕನ್ನಿಕಾ ಆರಾಧನೆ ನಡೆಯಲಿದೆ.
ರೇಣುಕಾ ಯಲ್ಲಮ್ಮ ದೇವಿಗೆ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಮಹಿಳೆಯರಿಂದ ತಂಬಿಟ್ಟಿನ ಆರತಿ ನಡೆಯಲಿದೆ. ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ದೇವಸ್ಥಾನದ ಆವರಣದಲ್ಲಿ ‘ಅನ್ನ ಸಂತರ್ಪಣೆ’ ಏರ್ಪಡಿಸಲಾಗಿದೆ.
ಸಂಜೆ 4.15ರಿಂದ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಾಲೋತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಮುತ್ತಿನ ಪಲ್ಲಕ್ಕಿಯಲ್ಲಿ ಪುಷ್ಪಮಾಲೆಗಳಿಂದ ಅಲಂಕೃತವಾದ ದೇವಿಯ ಮೆರವಣಿಗೆ ಏರ್ಪಡಿಸಲಾಗಿದೆ.
‘ಮುತ್ತಿನ ಪಲ್ಲಕ್ಕಿ’ ಮೆರವಣಿಗೆಯಲ್ಲಿ ತಿರುಪತಿಯ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್, ಪೂಜಾ ಕುಣಿತ, ತಮಟೆ, ನಗಾರಿ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ಫೆ.2ರಂದು ಬೆಳಿಗ್ಗೆ 6ಕ್ಕೆ ದೇವಿಯನ್ನು ದೇವಸ್ಥಾನದ ಮೂಲಸ್ಥಾನಕ್ಕೆ ಆಹ್ವಾನಿಸಿ, ಬೆಳಿಗ್ಗೆ 8.30ಕ್ಕೆ ಕ್ಷೀರಾಭಿಷೇಕ ಮತ್ತು ಅಲಂಕಾರ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.