ಮಂಡ್ಯ: ‘ಗುರು ಆದವರು ಭಕ್ತರಿಗೆ ಜ್ಞಾನ, ಅರಿವು ನೀಡಲು ಹಾಗೂ ಬೆಳಕಿನೆಡೆಗೆ ಕರೆದುಕೊಂಡು ಹೋಗಲು ಬರುತ್ತಾರೆಯೇ ವಿನಾ ಸಿರಿ ಸಂಪತ್ತು ಗಳಿಸಲು ಬರುವುದಿಲ್ಲ’ ಎಂದು ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ವತಿಯಿಂದ ಬುಧವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಮಠಗಳು ಸಮಾಜಕ್ಕೆ ಜಾತ್ಯತೀತವಾಗಿ ದೊಡ್ಡ ಕೊಡುಗೆಯನ್ನೇ ನೀಡಿವೆ. ನಮ್ಮ ಸಿದ್ದಗಂಗಾ ಮಠ, ಸುತ್ತೂರು ಮಠ ನಮ್ಮ ಬೇಬಿ ಮಠ ಸೇರಿದಂತೆ ರಾಜ್ಯದ ಮಠಗಳ ಶಾಲೆಗಳಲ್ಲಿ, ಹಾಸ್ಟೆಲ್ಗಳಲ್ಲಿ ಎಲ್ಲಾ ಜಾತಿ ಜನಾಂಗದ ವಿದ್ಯಾರ್ಥಿಗಳಿರುವುದು ಇದಕ್ಕೆ ಸಾಕ್ಷಿ ಎಂದರು.
ಪ್ರಾಧ್ಯಾಪಕಿ ಮಮತಾ ಸಾಲಿಮಠ ಉಪನ್ಯಾಸ ನೀಡಿ, ‘ಗುರು ಮೂಲ, ಋಷಿಮೂಲ ಮತ್ತು ನದಿ ಮೂಲವನ್ನು ಹುಡುಕುವ ಸಾಹಸ ಯಾರು ಮಾಡುವುದಿಲ್ಲ. ಈ ವೀರಶೈವ ಧರ್ಮ ಒಂದು ಧರ್ಮಕ್ಕೆ ಒಂದು ಜಾತಿ ಒಂದು ಮತಕ್ಕೆ ಮಾತ್ರ ಸೀಮಿತವಾಗದೆ ಮನುಕುಲದ ಉದ್ಧಾರಕ್ಕಾಗಿ ರೂಪುಗೊಂಡಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿದರು. ಮಳವಳ್ಳಿ ತಾಲ್ಲೂಕು ಧನಗೂರು ಸಿಂಹಾಸನ ಸಂಸ್ಥಾನ ಮಠದ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮಿ, ಕೆ.ಆರ್. ಪೇಟೆ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ನಾಗರಾಜು, ಸರ್ಕಲ್ ಇನ್ಸ್ಪೆಕ್ಟರ್ ನವೀನ್, ಬಸವ ಸಮಿತಿಯ ಜಿಲ್ಲಾ ಘಕಟದ ಅಧ್ಯಕ್ಷ ಎಂ.ಬಿ.ರಾಜಶೇಖರ್, ಕೆ.ಎಸ್. ಷಡಕ್ಷರಿ, ಎಂ.ಎಸ್.ಶಿವಪ್ರಕಾಶ್, ಗೊರವಾಲೆ ಚಂದ್ರಶೇಖರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.