ADVERTISEMENT

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಡಾ.ದೀಪಿಕಾ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:38 IST
Last Updated 21 ಫೆಬ್ರುವರಿ 2026, 6:38 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದಲ್ಲಿ ಅರುಣೋದಯ ಜಾನಪದ ಕಲಾ ತಂಡ ಪ್ರದರ್ಶಿಸಿದ ಹೆಣ್ಣುಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನ ಕುರಿತ ನಾಟಕ ಪ್ರದರ್ಶನದಲ್ಲಿ ವೈದ್ಯೆ ಡಾ.ದೀಪಿಕಾ ಮಾತನಾಡಿದರು 
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದಲ್ಲಿ ಅರುಣೋದಯ ಜಾನಪದ ಕಲಾ ತಂಡ ಪ್ರದರ್ಶಿಸಿದ ಹೆಣ್ಣುಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನ ಕುರಿತ ನಾಟಕ ಪ್ರದರ್ಶನದಲ್ಲಿ ವೈದ್ಯೆ ಡಾ.ದೀಪಿಕಾ ಮಾತನಾಡಿದರು    

ಪಾಂಡವಪುರ: ‘ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಎಲ್ಲರೂ ಮುಂದಾಗಬೇಕಿದೆ. ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಕೃತ್ಯಗಳ ಬಗ್ಗೆ ಮಾಹಿತಿ ನೀಡಿವರಿಗೆ ಸರ್ಕಾರದಿಂದ ₹1 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಚಿಕ್ಕಬ್ಯಾಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ದೀಪಿಕಾ ತಿಳಿಸಿದರು.

ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದಲ್ಲಿ ಆರೋಗ್ಯ ಇಲಾಖೆ ಹಾಗೂ ವಿಮೋಚನೆ ಮಹಿಳಾ ಹಕ್ಕುಗಳ ವೇದಿಕೆ ಸಹಯೋಗದಲ್ಲಿ ‘ಹೆಣ್ಣು ಮಕ್ಕಳು ಹುಟ್ಟುವ ಹಕ್ಕಿಗಾಗಿ ಆಂದೋಲನ’ ಕುರಿತು ಮಂಡ್ಯದ ಅರುಣೋದಯ ಜಾನಪದ ಕಲಾತಂಡ ಪ್ರದರ್ಶಿಸಿದ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹೆಣ್ಣುಮಕ್ಕಳು ತಾಯಿ, ಹೆಂಡತಿ, ಗೆಳತಿಯಾಗಿ ಬೇಕು. ಆದರೆ ಮಗಳೇಕೆ ಬೇಡ? ಈ ಮನಸ್ಥಿತಿಯಿಂದಲೇ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡು ಮಕ್ಕಳು 50 ವರ್ಷವಾದರೂ ಮದುವೆಯಾಗದೆ ಉಳಿದಿದ್ದಾರೆ. ಪ್ರಕೃತಿದತ್ತವಾಗಿ ನೋಡುವುದಾದರೆ 1000 ಗಂಡು ಮಕ್ಕಳು ಭೂಮಿ ಮೇಲೆ ಜನಿಸಿ ಬಂದರೆ 1020 ಹೆಣ್ಣುಮಕ್ಕಳು ಭೂಮಿ ಮೇಲೆ ಜನಿಸಿ ಬರಬೇಕು. ಆದರೆ 1000ಕ್ಕಿಂತ ಕಡಿಮೆ ಇರುವುದು ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪರಿಸ್ಥಿತಿ ಹೀಗೆ ಮುಂದುವರಿದರೆ ದಿನ ಒಂದು ಹೆಣ್ಣು ಮಗಳನ್ನು ಐದು ಜನ ಗಂಡು ಮಕ್ಕಳು ಮದುವೆಯಾಗುವ ಸಂದರ್ಭ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ವ್ಯಾಪ್ತಿಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವಂಥ ಕೃತ್ಯ ನಡೆಯುತ್ತಿದ್ದರೆ, ಅದರ ಬಗ್ಗೆ ಮಾಹಿತಿಯನ್ನು ನೀಡಿ ಬಹುಮಾನ ಪಡೆಯಬಹುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಸಿ.ಶಿವಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಹರಿಕೃಷ್ಣ, ಸಮುದಾಯ ಆರೋಗ್ಯಾಧಿಕಾರಿ ಸುಷ್ಮಾ, ವಿಮೋಚನಾ ಸಂಸ್ಥೆಯ ಇಂಪನಾ, ಕಲಾತಂಡದ ನಾಯಕಿ ಮಂಜುಳಾ ಹಾಗೂ ಕಲಾವಿದರು ಇದ್ದರು.
ನಾಟಕವನ್ನು ವೀಕ್ಷಿಸಿದ ರೈತರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.