ADVERTISEMENT

ಪ್ರತ್ಯೇಕ ಅಪಘಾತ: ನಾಲ್ವರು ಬೈಕ್ ಸವಾರರ ಸಾವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:12 IST
Last Updated 20 ಸೆಪ್ಟೆಂಬರ್ 2020, 3:12 IST
ಶಿವಪ್ಪ
ಶಿವಪ್ಪ   

ಮಂಡ್ಯ: ಜಿಲ್ಲೆಯಲ್ಲಿ ನಾಲ್ಕು ಕಡೆ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಪಾಂಡವಪುರ: ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಾಣಿಕ್ಯನಹಳ್ಳಿ ಗೇಟ್‌ ಬಳಿ ಶನಿವಾರ ನಡೆದಿದೆ.

ADVERTISEMENT

ಅಮೃತಿ ಗ್ರಾಮದ ಶಿವಪ್ಪ (70) ಮೃತಪಟ್ಟವರು. ಜಕ್ಕನಹಳ್ಳಿ ಕ್ರಾಸ್‌ ಮಾರ್ಗವಾಗಿ ಬರುತ್ತಿದ್ದ ಕಾರು ಮಾಣಿಕ್ಯನಹಳ್ಳಿ ಗೇಟ್ ಬಳಿ ತಿರುವು ಪಡೆಯುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರು ಚಾಲಕ ಪರಾರಿಯಾಗಿದ್ದು, ಜಖಂಗೊಂಡ ಕಾರು ಮತ್ತು ಸ್ಕೂಟರ್‌ನ್ನು ಮೇಲುಕೋಟೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ಬೈಕ್‌ಗೆ ಆಟೊ ಡಿಕ್ಕಿ: ವ್ಯಕ್ತಿ ಸಾವು

ಮದ್ದೂರು: ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಪ್ರಯಾಣಿಕರ ಆಟೊವೊಂದು ತಾಲ್ಲೂಕಿನ ಆತಗೂರ ಕ್ರಾಸ್ ಬಳಿ ಶುಕ್ರವಾರ ಸಂಜೆ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾರೆ.

ಕೆಸ್ತೂರು ಬಳಿಯ ತೊರೆಶೆಟ್ಟಹಳ್ಳಿ ಗ್ರಾಮದಿಂದ ಆತಗೂರಿಗೆ ಹೋಗುವ ಕ್ರಾಸ್‌ನಲ್ಲಿ ಅಪಘಾತವಾಗಿದ್ದು ಶಿವಲಿಂಗಯ್ಯ (43) ಎಂಬುವವರ ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಸ್ಪಂದಿಸದೇ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಬೈಕ್ ಸವಾರ ಶ್ರೀನಿವಾಸ್ ಗಾಯಗೊಂಡಿದ್ದಾರೆ. ಕೆಸ್ತೂರು ಪೊಲೀಸರು ಆಟೊ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್‌ ಪಲ್ಟಿ: ಪತ್ರಕರ್ತ ಸಾವು

ನಾಗಮಂಗಲ: ಬೈಕ್‌ ಆಯತಪ್ಪಿ ಬಿದ್ದು ತಾಲ್ಲೂಕಿನ ಜೋಡಿನೇರಲೆಕೆರೆ ಗ್ರಾಮದ ಯುವ ಪತ್ರಕರ್ತ ಹರೀಶ್ (34) ಶನಿವಾರ ಸಾವನ್ನಪ್ಪಿದ್ದಾರೆ.

ಪಟ್ಟಣದ ಸಂಬಂಧಿಯೊಬ್ಬರ ಮನೆಯಲ್ಲಿ ಗುರುವಾರ ರಾತ್ರಿ ಊಟ ಮುಗಿಸಿ ಜೋಡಿನೇರಲಕೆರೆ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ತಲೆಗೆ ಏಟು ಬಿದ್ದಿತ್ತು. ಅವರಿಗೆ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಹರೀಶ್ ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳ ಅರೆಕಾಲಿಕ ವರದಿಗಾರರಾಗಿ ಕಾರ್ಯ ನಿರ್ವಹಿಸಿ, ಸದ್ಯ ಸ್ಥಳೀಯ ಪತ್ರಿಕೆಯವರದಿಗಾರರಾಗಿದ್ದರು.

ಯುವಕ ಸಾವು

ಹಲಗೂರು: ಟ್ರಾಕ್ಟರ್‌ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಸಮೀಪದ ದೇವಿರಹಳ್ಳಿ ಗೇಟ್ ಬಳಿ ಸಂಭವಿಸಿದೆ.

ಗುಂಡಾಪುರ ಗ್ರಾಮದ ರಕ್ಷಿತ್ (23) ಮೃತ ಯುವಕ. ರಕ್ಷಿತ್ ಮತ್ತು ಮನುಕುಮಾರ ಸ್ವಗ್ರಾಮದಿಂದ ಬೆಳಗಿನ ಜಾವ ಕನಕಪುರ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದ್ದು, ತೀವ್ರ ಗಾಯಗೊಂಡ ರಕ್ಷಿತ್ ನನ್ನು ಚಿಕಿತ್ಸೆಗಾಗಿ ಮಳವಳ್ಳಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಮನುಕುಮಾರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.