ಶ್ರೀರಂಗಪಟ್ಟಣ: ಅಕ್ಕಿ ಕೇಳಿದ ವ್ಯಕ್ತಿಗೆ ನೀನು ಸಾಯಬಹುದು ಎಂದು ಉಡಾಫೆಯಿಂದ ಉತ್ತರಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರ ಹೇಳಿಕೆಯನ್ನು ಖಂಡಿಸಿ ಸಚಿವರಿಗೆ ಅಕ್ಕಿ ಮತ್ತು ಬೇಳೆಯನ್ನು ಕಳುಹಿಸುವ ಮೂಲಕ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವರ ಹೇಳಿಕೆಯನ್ನು ಖಂಡಿಸಿದರು.
ಪಟ್ಟಣದಿಂದ ಕೊರಿಯರ್ ಮೂಲಕ 2 ಕೆ.ಜಿ ಮುಗ್ಗಲು ಅಕ್ಕಿ ಮತ್ತು 1 ಕೆ.ಜಿ ಹುಳು ಮಿಶ್ರಿತ ಬೇಳೆಯನ್ನು ಸಚಿವರಿಗೆ ಕಳುಹಿಸಿದರು. ಪೊಟ್ಟಣದ ಮೇಲೆ ಬೆಂಗಳೂರಿನ ವಿಧಾನಸೌಧದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ವಿಳಾಸ ಬರೆದು ಅಕ್ಕಿ, ಬೇಳೆಯನ್ನು ಕಳುಹಿಸಲಾಯಿತು.
‘ಸಚಿವ ಉಮೇಶ ಕತ್ತಿ ಅವರು ಸಚಿವ ಸ್ಥಾನದ ಘನತೆಯನ್ನು ಮರೆತು ಶ್ರೀಸಾಮಾನ್ಯನ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದಾರೆ. ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈ ಬಿಡಬೇಕು’ ಎಂದು ವೇದಿಕೆಯ ಅಧ್ಯಕ್ಷ ಬಿ.ಶಂಕರಬಾಬು ಆಗ್ರಹಿಸಿದರು.
‘ರಾಜ್ಯ ಸರ್ಕಾರ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದು, ಜನರ ಹಿತ ಮರೆತಿದೆ. ಕೋವಿಡ್ ವಿಷಮ ಸ್ಥಿತಿ ನಿರ್ವಹಿಸಲು ವಿಫಲವಾಗಿದೆ. ಜನ ಸಾಯುತ್ತಿದ್ದಾರೆ. ಜನ ವಿರೋಧಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರ ಪತಿ ಆಳ್ವಿಕೆ ಜಾರಿಗೊಳಿಸಬೇಕು’ ಎಂದು ವಕೀಲ ಸಿ.ಎಸ್. ವೆಂಕಟೇಶ್ ಆಗ್ರಹಿಸಿದರು. ವೇದಿಕೆ ಉಪಾಧ್ಯಕ್ಷ ಮಂಜುನಾಥ್ ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.