ADVERTISEMENT

ಎಸ್‌ಐ ಮೇಲೆ ಎಎಸ್‌ಐ ಹಲ್ಲೆ: ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 12:26 IST
Last Updated 12 ನವೆಂಬರ್ 2019, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ತಾಲ್ಲೂಕಿನ ಬಸರಾಳು ಪೊಲೀಸ್‌ ಠಾಣೆ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಅದೇ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಅಕ್ಟೋಬರ್9ರಂದು ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅಕ್ಟೋಬರ್9ರಂದು ಕೆ.ಆರ್‌.ಪೇಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿದ್ದರು. ಭದ್ರತಾ ಕರ್ತವ್ಯಕ್ಕೆ ತೆರಳಿದ್ದ ಬಸರಾಳು ಠಾಣೆ ಸಬ್‌‌ಇನ್‌ಸ್ಪೆಕ್ಟರ್‌ ಜಯಗೌರಿ ಸಂಜೆ ಠಾಣೆಗೆ ಮರಳಿದ್ದಾರೆ. ಆ ಸಂದರ್ಭ ಸಹಾಯಕ ಸಬ್‌‌ಇನ್‌ಸ್ಪೆಕ್ಟರ್‌ ಶಿವನಂಜೇಗೌಡ ಠಾಣೆಯಲ್ಲಿದ್ದರು. ರಾತ್ರಿ ಗಸ್ತಿಗೆ ಸಿಬ್ಬಂದಿ ನೇಮಕ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ.

ರಾತ್ರಿ ಗಸ್ತು ಕರ್ತವ್ಯಕ್ಕೆ ತೆರಳುವಂತೆ ಜಯಗೌರಿ ಅವರು ಶಿವನಂಜೇಗೌಡರಿಗೆ ಸೂಚಿಸಿದ್ದಾರೆ. ಬೆಳಿಗ್ಗೆಯಿಂದಲೂ ಕರ್ತವ್ಯ ಮಾಡಿದ್ದು, ಮತ್ತೆ ಕರ್ತವ್ಯಕ್ಕೆ ಬರುವುದಿಲ್ಲ ಎಂದು ಎಎಸ್‌ಐ ತಿಳಿಸಿದ್ದಾರೆ. ಈಗ ಮನೆಗೆ ತೆರಳಿ ವಿಶ್ರಾಂತಿ ಪಡೆದು ಮತ್ತೆ ರಾತ್ರಿ ಕರ್ತವ್ಯ ಮಾಡುವಂತೆ ಎಸ್‌ಐ ತಿಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಎಎಸ್‌ಐ, ಎಸ್‌ಐ ಜಯಗೌರಿ ಮೇಲೆ ಹಲ್ಲೆ ನಡೆಸಿದ್ದಾರೆ.

ADVERTISEMENT

ಸಮವಸ್ತ್ರದ ಕತ್ತಿನ ಪಟ್ಟಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಜಯಗೌರಿ ದೂರು ಸಲ್ಲಿಸಿದ್ದಾರೆ. ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.