
ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಶನಿವಾರ ಸಿದ್ದಪ್ಪಾಜಿ ದೇವರ ನಾಲ್ಕನೇ ವರ್ಷದ ಕಂಡಾಯ ಮಹೋತ್ಸವ ಶ್ರದ್ಧೆ, ಭಕ್ತಿಯಿಂದ ನಡೆಯಿತು.
ಸಮೀಪ ಬೆಂಗಳೂರು– ಮೈಸೂರು ಹೆದ್ದಾರಿ ಬಳಿಯ ಆಂಜನೇಯಸ್ವಾಮಿ ದೇವಾಲಯದಿಂದ ಗ್ರಾಮದ ವರೆಗೆ ಕಂಡಾಯ ಮತ್ತು ಬಸವನನ್ನು ಮೆರವಣಿಗೆಯಲ್ಲಿ ತರಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಿತು. ಉತ್ಸವ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಈಡುಗಾಯಿ ಸೇವೆ ಮತ್ತು ದೂಪ, ದೀಪದ ಸೇವೆ ಸಲ್ಲಿಸಿದರು. ಚರ್ಮವಾದ್ಯ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು.
ಕಂಡಾಯ ಮಹೋತ್ಸವದ ನಿಮಿತ್ತ ಸಿದ್ದಪ್ಪಾಜಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಚಂದ್ರ ಮಂಡಲೋತ್ಸವ ಗಮನ ಸೆಳೆಯಿತು. ಸ್ಥಳೀಯರು ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಶಾಸಕ ರಮೇಶ ಬಂಡಿಸಿದ್ದೇಗೌಡ, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ, ಸಿದ್ದಪ್ಪಾಜಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ರವಿ, ಖಜಾಂಚಿ ಸುರೇಶ್, ಸಹ ಕಾರ್ಯದರ್ಶಿ ನಾಗರಾಜು, ವಿಶ್ವಕರ್ಮ ಕುಲದ ಮುಖಂಡ ರಾಮಾನುಜಾಚಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ದೊಡ್ಡ ಯಜಮಾನ್ ಪ್ರಕಾಶಣ್ಣ, ಚಿಕ್ಕ ಯಜಮಾನ್ ನಾರಾಯಣಪ್ಪ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ. ಚಲುವರಾಜು, ವೆಂಕಟೇಶ್, ಸೋಮಶೇಖರ್, ಮೇಳಾಪುರ ರಾಜು, ಶಂಕರ್ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.