ADVERTISEMENT

ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ; ಕಾವೇರಿ ನದಿಯಲ್ಲಿ ಭಕ್ತರ ಪುಣ್ಯ ಸ್ನಾನ

ಗಂಜಾಂ ನಿಮಿಷಾಂಬ ಮಾಘ ಶುದ್ಧ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 14:23 IST
Last Updated 12 ಫೆಬ್ರುವರಿ 2025, 14:23 IST
ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ, ಮಾಘ ಶುದ್ಧ ಹುಣ್ಣಿಮೆ ನಿಮಿತ್ತ ಭಕ್ತರು ಕಾವೇರಿ ನದಿಯಲ್ಲಿ ಬುಧವಾರ ಬೆಳಿಗ್ಗೆ ಪುಣ್ಯಸ್ನಾನ ಮಾಡಿದರು
ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ, ಮಾಘ ಶುದ್ಧ ಹುಣ್ಣಿಮೆ ನಿಮಿತ್ತ ಭಕ್ತರು ಕಾವೇರಿ ನದಿಯಲ್ಲಿ ಬುಧವಾರ ಬೆಳಿಗ್ಗೆ ಪುಣ್ಯಸ್ನಾನ ಮಾಡಿದರು   

ಶ್ರೀರಂಗಪಟ್ಟಣ: ಮಾಘ ಶುದ್ಧ ಹುಣ್ಣಿಮೆ ಪ್ರಯುಕ್ತ ಗಂಜಾಂ ನಿಮಿಷಾಂಬ ದೇಗುಲದ ಬಳಿ ಕಾವೇರಿ ನದಿಯಲ್ಲಿ ಭಕ್ತರು ಬುಧವಾರ ಪುಣ್ಯ ಸ್ನಾನ ಮಾಡಿದರು.

ನಸುಕಿನ 3 ಗಂಟೆಯಿಂದ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಪ್ರಕ್ರಿಯೆ ಆರಂಭವಾಯಿತು. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ, ರಾಮನಗರ, ಕೋಲಾರ ಇತರ ಕಡೆಗಳಿಂದ ಬಂದವರು ಕಾವೇರಿ ನದಿಯಲ್ಲಿ ಮಿಂದರು. ಕಾವೇರಿ ನದಿಗೆ ಕರ್ಪೂರ ಮತ್ತು ನಿಂಬೆ ಹಣ್ಣಿನ ಆರತಿ ಬೆಳಗಿದರು. ಬೆಳಿಗ್ಗೆ 6 ಗಂಟೆ ವೇಳೆ ನದಿ ತೀರದಲ್ಲಿ ಭಕ್ತರ ದಂಡೇ ಕಂಡು ಬಂತು.  ಮಡಿ ಬಟ್ಟೆಯಲ್ಲಿ ನಿಮಿಷಾಂಬ ದೇವಿಯ ದರ್ಶನ ಪಡೆದು ಪುನೀತರಾದರು.

ನಸುಕಿನ ಜಾವ  ಒಂದು ಗಂಟೆಯಿಂದ ಪೂಜೆಗಳು ಆರಂಭವಾದವು. ನಿಮಿಷಾಂಬ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಅಭಿಷೇಕಗಳು ಜರುಗಿದವು. ಬೆಳಿಗ್ಗೆ 8.30ರಿಂದ ಗಣ ಹೋಮ, ನಕ್ಷತ್ರ ಹೋಮ, ದುರ್ಗಾ ಹೋಮಗಳು ನಡೆದವು. ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣಸ್ವಾಮಿ ಪೂಜೆಯನ್ನು ಏರ್ಪಡಿಸಲಾಗಿತ್ತು.  ಪರಿವಾರದ ದೇವರಿಗೂ ಪೂಜೆಗಳು ನಡೆದವು. ದೇಗುಲದ ಹೊರಾಂಗಣದಲ್ಲಿ ಭಕ್ತಿ ಗೀತೆ, ಭಜನೆ, ನಿಮಿಷಾಂಬ ದೇವಿ ಪಾರಾಯಣ ಏರ್ಪಡಿಸಲಾಗಿತ್ತು.

ADVERTISEMENT

ರಥೋತ್ಸವ, ಅನ್ನಸಂತರ್ಪಣೆ

 ಗಂಜಾಂನ ಪ್ರಮುಖ ಬೀದಿಗಳಲ್ಲಿ ನಿಮಿಷಾಂಬ ದೇವಿಯ ರಥೋತ್ಸವ ನಡೆಯಿತು. ಜಿಲ್ಲಾಧಿಕಾರಿ ಕುಮಾರ ರಥೋತ್ಸವಕ್ಕೆ ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ ಹಾಗೂ ಭಕ್ತರು ಶ್ರದ್ಧೆಯಿಂದ ಸರ್ವಾಲಂಕೃತ ರಥವನ್ನು ಎಳೆದರು. ಸುಬ್ರಹ್ಮಣ್ಯದಿಂದ ತರಿಸಿದ್ದ ಕಾಷ್ಠ ರಥವನ್ನು ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ರಥಕ್ಕೆ ಜನರು ಪೂಜೆ ಸಲ್ಲಿಸಿದರು. ಈಡುಗಾಯಿ ಮತ್ತು ಕರ್ಪೂರದ ಸೇವೆ ಸಲ್ಲಿಸಿದರು. ಬೆಂಗಳೂರಿನ ಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.