ADVERTISEMENT

ಮಂಡ್ಯ: ಬೀದಿಬದಿ ವ್ಯಾಪಾರಿಯ ವಾಹನಕ್ಕೆ ಕಿಡಿಗೇಡಿಗಳಿಂದ ಬೆಂಕಿ: ₹7 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 12:56 IST
Last Updated 18 ಏಪ್ರಿಲ್ 2025, 12:56 IST
ನಾಗಮಂಗಲ ತಾಲ್ಲೂಕಿನ ಕೆಂಬಾರೆ ಗ್ರಾಮ ಬೀದಿಬದಿ ವ್ಯಾಪಾರಿಗಳಾಗಿದ್ದ ಗೀತಾ ಮಹೇಶ್ ಅವರಿಗೆ ಸೇರಿದ ವಾಹನಕ್ಕೆ  ಬೆಂಕಿ ಹಚ್ಚಿರುವುದು
ನಾಗಮಂಗಲ ತಾಲ್ಲೂಕಿನ ಕೆಂಬಾರೆ ಗ್ರಾಮ ಬೀದಿಬದಿ ವ್ಯಾಪಾರಿಗಳಾಗಿದ್ದ ಗೀತಾ ಮಹೇಶ್ ಅವರಿಗೆ ಸೇರಿದ ವಾಹನಕ್ಕೆ  ಬೆಂಕಿ ಹಚ್ಚಿರುವುದು   

ನಾಗಮಂಗಲ: ಸಂತೆ, ಜಾತ್ರೆಗಳಲ್ಲಿ ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಸಾಮಗ್ರಿ ತುಂಬಿದ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು ₹7 ಲಕ್ಷ ನಷ್ಟವಾಗಿದೆ.

ತಾಲ್ಲೂಕಿನ ಬೆಳ್ಳೂರ್ ಕ್ರಾಸ್ ಬಳಿಯ ಕೆಂಬಾರೆ ಗ್ರಾಮದ ನಿವಾಸಿ ಗೀತಾ ಮಹೇಶ್ ದಂಪತಿಗೆ ಸೇರಿದ್ದ ಅಶೋಕ್ ಲೈಲ್ಯಾಂಡ್ ವಾಹನ ಮತ್ತು ಅದರಲ್ಲಿದ್ದ ₹2 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳಿಗೆ ಗುರುವಾರ ರಾತ್ರಿ 2.30ರ ಸುಮಾರಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ದಂಪತಿ ವ್ಯಾಪಾರಕ್ಕಾಗಿ ಸಾಲ ಮಾಡಿ ಸಾಮಗ್ರಿಗಳನ್ನು ‌ಖರೀದಿಸಿದ್ದರು. ಅನಾಹುತದಲ್ಲಿ ಜೀವನಾಧಾರವಾಗಿದ್ದ ಸಾಮಗ್ರಿಗಳು ನಾಶವಾಗಿದ್ದು, ಕುಟುಂಬವು ರೋದಿಸುತ್ತಿದೆ. 15 ದಿನಗಳ ಹಿಂದೆ ಇದೇ ಊರಿನಲ್ಲಿ ಕಿಡಿಗೇಡಿಗಳು ಪಲ್ಸರ್ ಬೈಕ್‌ಗೆ ಬೆಂಕಿ ಹಚ್ಚಿದ್ದರು ಎಂದು ಸ್ಥಳೀಯರು ಹೇಳಿದರು.

ADVERTISEMENT

‘ಸಾಲ ಮಾಡಿ ಅಶೋಕ ಲೈಲ್ಯಾಂಡ್ ವಾಹನವನ್ನು ಖರೀದಿಸಿದ್ದೆ. ಹಬ್ಬದ ಪ್ರಯುಕ್ತ ಗುರುವಾರ ವ್ಯಾಪಾರ ಮುಗಿಸಿ ಮನೆ ಮುಂದೆ ವಾಹನ ನಿಲ್ಲಿಸಿದ್ದೆ. ಆದರೆ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನಮ್ಮ ಕುಟುಂಬಕ್ಕೆ ನ್ಯಾಯ ಬೇಕು’ ವ್ಯಾಪಾರಿ ಮಹೇಶ್ ಮನವಿ ಮಾಡಿದರು.

ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.