ADVERTISEMENT

ಷರತ್ತು ಉಲ್ಲಂಘನೆ: ರೈತರ ದೂರು

ಸರ್ಕಾರಕ್ಕೆ ಹಣ ಪಾವತಿಸದ ನಿರಾಣಿ ಶುಗರ್ಸ್‌: ಆರೋಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:27 IST
Last Updated 12 ಏಪ್ರಿಲ್ 2021, 5:27 IST
ಶ್ರೀರಂಗಪಟ್ಟಣದಲ್ಲಿ ಭಾನುವಾರ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆ ನಡೆಯಿತು
ಶ್ರೀರಂಗಪಟ್ಟಣದಲ್ಲಿ ಭಾನುವಾರ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆ ನಡೆಯಿತು   

ಶ್ರೀರಂಗಪಟ್ಟಣ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ ಎಸ್‌ಕೆ)ಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್‌ ಗುತ್ತಿಗೆ ಒಪ್ಪಂದದ ಷರತ್ತು ಗಳನ್ನು ಉಲ್ಲಂಘಿಸಿದ್ದು, ಸಂಬಂಧಿಸಿದ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಪಿಎಸ್‌ಎಸ್‌ಕೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಕೆ.ನಾಗೇಂದ್ರಸ್ವಾಮಿ, ‘ಸಚಿವ ಮುರುಗೇಶ ನಿರಾಣಿ ಅಧ್ಯಕ್ಷರಾ ಗಿರುವ ನಿರಾಣಿ ಶುಗರ್ಸ್‌ ಕಂಪೆನಿ ಕಾರ್ಖಾನೆಯನ್ನು ಗುತ್ತಿಗೆ ಪಡೆದಿದೆ. ಆದರೆ ಗುತ್ತಿಗೆ ಪಡೆಯುವಾಗ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಉಲ್ಲಂಘಿಸಿದೆ. ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಇನ್ನೂ ಕಟ್ಟಿಲ್ಲ. ಕಾರ್ಖಾನೆಯ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದೆ ಆತಂಕದಲ್ಲಿದ್ದಾರೆ. ಈ ಭಾಗದ ಕಬ್ಬು ಬೆಳೆಗಾರರಿಗೂ ನಂಬಿಕೆ ಇಲ್ಲ. ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಗೊಂದಲ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ದರಸಗುಪ್ಪೆ ಮಂಜುನಾಥ್‌ ಮಾತನಾಡಿ, ‘ಒಪ್ಪಂದದಂತೆ ನಿರಾಣಿ ಶುಗರ್‌ ಕಂಪೆನಿ 90 ದಿನಗಳಲ್ಲಿ ಸರ್ಕಾರಕ್ಕೆ ₹ 20 ಕೋಟಿ ಪಾವತಿಸಬೇಕಿತ್ತು. ಆದರೆ, ಕೇವಲ ₹ 5 ಕೋಟಿ ಮಾತ್ರ ಪಾವತಿಸಿದೆ. ಇಷ್ಟಾದರೂ ಜಿಲ್ಲಾಡಳಿತ ಕಂಪೆನಿಯಿಂದ ಬರಬೇಕಾದ ಬಾಕಿ ಹಣ ಪಡೆಯಲು ಮನಸ್ಸು ಮಾಡಿಲ್ಲ. ಏ.17ರ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳ ರೈತರು ಸಭೆ ನಡೆಸಿ ಹೋರಾಟ ರೂಪಿಸಲಿದ್ದೇವೆ’ ಎಂದು ಎಚ್ಚರಿಸಿದರು.

ADVERTISEMENT

ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ, ಮುಖಂಡರಾದ ಸಿ.ಸ್ವಾಮಿ ಗೌಡ, ತಮ್ಮೇಗೌಡ, ನಾಗೇಂದ್ರು, ಚಂದಗಾಲು ಶಂಕರ್‌, ಜಿ.ಇ.ಸುಧಾಕರ್, ಆಂಜನೇಯ, ರಂಗೇಗೌಡ, ಅಶೋಕ್‌, ಜಯರಾಂ, ದೊಡ್ಡಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.