ಮಂಡ್ಯ: ಕಲಬುರಗಿಯಲ್ಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನವು ಸೆ.29, 30ರಂದು ನಡೆಯಲಿದೆ ಎಂದು ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತ್ರಾಜ್ ಹೇಳಿದರು.
‘ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು, ಬಿಹಾರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಮಟ್ಟದ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕಬ್ಬು ಬೆಳೆಗಾರರ ಸ್ಥಿತಿಗತಿ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ’ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
‘ಟನ್ ಕಬ್ಬಿಗೆ ಕೇಂದ್ರ ಸರ್ಕಾರವು ₹5 ಸಾವಿರ ಬೆಲೆ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಸಕ್ಕರೆ ಕಂಪನಿಯು ಮಾಲೀಕರ ಮುಲಾಜಿನಲ್ಲಿ ನಡೆಯುತ್ತಿದೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ₹5 ಸಾವಿರ ಎಫ್ಆರ್ಪಿ ಮತ್ತು ರಾಜ್ಯ ಸರ್ಕಾರ ₹500 ಎಸ್ಎಪಿ ನಿಗದಿಪಡಿಸದೆ ರೈತ ವಿರೋಧಿಗಳಾಗಿವೆ’ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿ ಯೋಜನೆಗೆ ಕಬ್ಬು ಕಟಾವು ಮಾಡುವುದನ್ನು ಸೇರಿಸಬೇಕು. ಇದರಿಂದ ಕಬ್ಬು ಕಟಾವು ಮಾಡಲು ಕೂಲಿ ಆಳುಗಳು ಸಹ ಸಿಕ್ಕಂತಾಗುತ್ತದೆ. ಕಬ್ಬು ತುಂಬಿದ ವಾಹನ ಇತರೆ ಗಾಡಿಗಳು ಕಬ್ಬು ತುಂಬಿಕೊಂಡು ಬಂದ ತಕ್ಷಣ ಅನ್ಲೋಡ್ ಮಾಡಬೇಕು. ವಿನಾಕಾರಣ ಕಬ್ಬನ್ನು ಒಣಗಿಸಬಾರದು. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಡಿತ ಮಾಡಿಕೊಳ್ಳುವಾಗ ಕಿ.ಮೀ. ಆಧಾರದ ಮೇಲೆ ಹಣ ಕಡಿತ ಮಾಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಕುಳ್ಳೇಗೌಡ, ಮರಿಲಿಂಗೇಗೌಡ, ಕೆಂಪರಾಜು, ಶುಕುಮಾರ್, ರಾಮಕೃಷ್ಣ, ಜಯಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.