– ಐಸ್ಟಾಕ್ ಚಿತ್ರ
ಮಂಡ್ಯ: ಅರಿವು ಬೋಧಿ ಫೌಂಡೇಷನ್, ಶಿಕ್ಷಕರ ವರ್ಲ್ಡ್ ಡಾಟ್ ಕಾಮ್ ಸಹಯೋಗದಲ್ಲಿ ಮೇ 17ರಂದು ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ನೇಮಕಾತಿಗಾಗಿ ಬೃಹತ್ ಉದ್ಯೋಗ ಮೇಳವನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಪ್ರಕಾಶ್ ಸಿ. ಕಾರಿಯಪ್ಪ ಹೇಳಿದರು.
‘ನಗರದ ಸರ್ಕಾರಿ ಮಹಿಳಾ ಕಾಲೇಜು, ರೋಟರಿ ವಿದ್ಯಾಸಂಸ್ಥೆ, ಬಾಲಕಿಯರ ಪದವಿಪೂರ್ವ ಕಾಲೇಜು(ಕಲ್ಲುಕಟ್ಟಡ), ಸಂತ ಜೋಸೆಫರ ವಿದ್ಯಾಮಂದಿರದಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಮೈಸೂರು ಶೈಕ್ಷಣಿಕ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಇನ್ನಿತರ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಸಂದರ್ಶನದ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
‘ಈ ಉದ್ಯೋಗ ಮೇಳದಲ್ಲಿ ಅರ್ಹತೆ ಹೊಂದಿದ ಅಂದಾಜು 2500ಕ್ಕೂ ಹೆಚ್ಚು ಶಿಕ್ಷಕ ಹುದ್ದೆ ಬಯಸುವ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳ ನೋಂದಣಿ ಉಚಿತವಾಗಿರುತ್ತದೆ. ಕುಣಿಗಲ್ ತಾಲೂಕಿನ ಕಾಡು ಮತ್ತೀಕೆರೆಯ ಅರೆ ಶಂಕರಮಠದ ಸಿದ್ದರಾಮ ಚೈತನ್ಯ ಸ್ವಾಮಿ ಮಾರ್ಗದರ್ಶನ ಹಾಗೂ ಶಾಸಕ ಪಿ.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ’ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 65 ಕನ್ನಡ ಶಿಕ್ಷಕರು, 105 ಇಂಗ್ಲಿಷ್, 110 ಗಣಿತ, 150 ವಿಜ್ಞಾನ, 160 ಸಮಾಜ ವಿಜ್ಞಾನ, 90 ಹಿಂದಿ, 55 ದೈಹಿಕ ಶಿಕ್ಷಕರು ಹಾಗೂ ಕಾಲೇಜಿನ ಉಪನ್ಯಾಸಕರು, ವಿಜ್ಞಾನ, ಭೌತಶಾಸ, ಜೀವಶಾಸ, ಇತಿಹಾಸ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ವಿಷಯವಾರು ಮಾಧ್ಯಮವಾರು ಆಯ್ಕೆ ಮಾಡಿಕೊಳ್ಳುತ್ತಾರೆ. ಅರ್ಹತೆ ಹೊಂದಿದ ಅಭ್ಯರ್ಥಿಗಳು ಮೊ.ನಂ.94820 49263 ಗೆ ಮಿಸ್ಡ್ಕಾಲ್ ಕೊಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
‘ಶಿಕ್ಷಕ ಹುದ್ದೆ ಬಯಸುವ ಅಭ್ಯರ್ಥಿಗಳು ಪ್ರಾಯೋಗಿಕ ಪಾಠಕ್ಕೆ ಸಿದ್ಧರಾಗಿ ಬಂದಿರಬೇಕು. ಬಯೋಡೇಟಾ, ಶೈಕ್ಷಣಿಕ ಅರ್ಹತೆಯ ಸರ್ಟಿಫಿಕೇಟ್ 10 ಜೆರಾಕ್ಸ್ ಪ್ರತಿ ಇರಬೇಕು. ಪ್ರತಿಯೊಬ್ಬ ಅಭ್ಯರ್ಥಿಗೆ 10 ಶಿಕ್ಷಣ ಸಂಸ್ಥೆಗಳಿಗೆ ಸಂದರ್ಶನ ಕೊಡಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಫೌಂಡೇಷನ್ನ ಗಣೇಶ್ಮಾಂಡ್ರೆ, ಸುರೇಶ್, ಕ್ರಾಂತಿಸಿಂಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.