ಹಲಗೂರು: ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ಅರಸಮ್ಮ ಜಾತ್ರೆಯ ಪ್ರಾರಂಭದ ಮೊದಲನೇ ದಿನದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು.
ಗ್ರಾಮದ ಮಧ್ಯ ಭಾಗದಲ್ಲಿರುವ ಕರಗದ ಮನೆಯಲ್ಲಿ ಬುಧವಾರ ದೇವರ ಕರಗಕ್ಕೆ ವಿಶೇಷ ಪೂಜೆ ನಡೆದವು. ದೇವರ ಗುಡ್ಡರು ತಮ್ಮ ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿ ಹೂವು, ಹೊಂಬಾಳೆ ಪ್ರಸಾದ ಪಡೆದು, ಸಾಂಪ್ರದಾಯಿಕವಾಗಿ ಆಯ್ದ ಕೆಲವು ಮನೆಗಳಲ್ಲಿ ಅಚ್ಚಂದ ಪಡೆದು ಪೂಜೆಯನ್ನು ಸ್ವೀಕರಿಸಿದರು.
ದೇವಸ್ಥಾನಕ್ಕೆ ಅರ್ಚಕರು ದೇವರ ಕರಗವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹರಕೆ ಹೊತ್ತವರು ಪಾನಕ ಮಜ್ಜಿಗೆಯನ್ನು ಎತ್ತಿನ ಗಾಡಿಗಳಲ್ಲಿ ತಂದು ನೆರೆದಿದ್ದ ಭಕ್ತರಿಗೆ ನೀಡಿ ಬಿಸಿಲಿನ ತಾಪ ತಣಿಸಿದರು.
ರಾತ್ರಿ ದೇವಿಯ ಕರಗ ಉತ್ಸವ ಮತ್ತು ಉರ್ಜಿ ಕುಣಿತದೊಂದಿಗೆ ಹೆಬ್ಬಾರೆಗಳ ನಾದ ನುಡಿಸುತ್ತ ಕರಗದ ಮನೆಗೆ ಮೆರವಣಿಗೆ ಮುಖಾಂತರ ಬರುವ ಸಂದರ್ಭ ಬೀದಿಯಲ್ಲಿ ಅಮ್ಮನವರಿಗೆ ಮತ್ತು ಹೆಬ್ಬಾರೆಗಳಿಗೆ ಗ್ರಾಮದ ಮುತ್ತೈದೆಯರು ಹಾಗೂ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.
ಸಮೀಪದ ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಕೆಂಪಯ್ಯನದೊಡ್ಡಿ, ಎಚ್.ಬಸಾಪುರ, ಹಾಗಾದೂರು ಮತ್ತು ಗುಂಡಾಪುರ ಸೇರಿದಂತೆ ಏಳು ಗ್ರಾಮದ ಭಕ್ತರು ಹಬ್ಬ ಆಚರಿಸುವ ಸಂಪ್ರದಾಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.