ADVERTISEMENT

ಪ್ರಜಾಪ್ರಭುತ್ವ ದಿನವೇ ನಡೆದ ಅಪಘಾತ; ನೀರುಗಂಟಿ ಸಾವು, ಮಕ್ಕಳು ಅನಾಥ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 15:51 IST
Last Updated 18 ಸೆಪ್ಟೆಂಬರ್ 2024, 15:51 IST
ಗಿರಿಜಾ
ಗಿರಿಜಾ   

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾದ ಸೆಪ್ಟೆಂಬರ್‌ 15ರಂದು ಮಾನವ ಸರಪಳಿ ನಿರ್ಮಿಸಲು ಶ್ರೀರಂಗಪಟ್ಟಣಕ್ಕೆ ಹೋಗಿ ವಾಪಸಾಗುತ್ತಿದ್ದಾಗ ನಡೆದ ಅಪಘಾತದಲ್ಲಿ ತಾಲ್ಲೂಕಿನ ತೆಂಡೇಕೆರೆ ಪಂಚಾಯಿತಿಯ ಎಚ್.ಬಳ್ಳೇಕೆರೆಯ ನಿವಾಸಿ, ನೀರುಗುಂಟಿ ಗಿರಿಜಾ (35) ಮೃತಪಟ್ಟಿದ್ದು, ಅವರ ಮಕ್ಕಳಾದ ಸುಕನ್ಯಾ (12) ಮತ್ತು ಸಿದ್ದಾರ್ಥ (7) ಅನಾಥರಾಗಿದ್ದಾರೆ. ದೊಡ್ಡಪ್ಪ ಹಾಗೂ ಅಜ್ಜಿಯೂ ಇತ್ತೀಚೆಗೆ ನಿಧನರಾಗಿದ್ದರು.

ಪಂಚಾಯಿತಿಯಲ್ಲಿ ವಾಟರ್‌ಮನ್ ಆಗಿದ್ದ ಪತಿ ಮಹಾದೇವ ಅವರು ಒಂದು ವರ್ಷದ ಹಿಂದೆ ಮೃತಪಟ್ಟ ಬಳಿಕ, ಗಿರಿಜಾ ಅವರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ‌

ತೆಂಡೇಕೆರೆಯಿಂದ 40 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣ – ಮೈಸೂರು ಗಡಿಯ ಸಮೀಪ ಮಾನವ ಸರಪಳಿ ನಿರ್ಮಿಸಿದ ಬಳಿಕ ಸ್ಕೂಟಿಯಲ್ಲಿ ವಾಪಸಾಗುವಾಗ ಅಪಘಾತವಾಗಿ ಗಿರಿಜಾ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಹುಣಸನಹಳ್ಳಿಯ ನೀರುಗಂಟಿ ಪ್ರಭಾವತಿ ಗಾಯಗೊಂಡಿದ್ದರು.

ADVERTISEMENT

‘ಕೂಡಲೇ ಮುಖ್ಯಮಂತ್ರಿ ನಿಧಿಯಿಂದ ವಿಶೇಷ ಪರಿಹಾರ ಒದಗಿಸಬೇಕು. ಮಕ್ಕಳ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳಬೇಕು. ಪ್ರಭಾವತಿ ಅವರ ವೈದ್ಯಕೀಯ ವೆಚ್ಚ ಭರಿಸಿ, ಪರಿಹಾರ ಒದಗಿಸಬೇಕು’ ಎಂದು ಶಾಸಕ ಎಚ್.ಟಿ.ಮಂಜು ಒತ್ತಾಯಿಸಿದ್ದಾರೆ. 

‘ಗಿರಿಜಾ ಅವರ ಸಾವಿನ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದು, ಸೌಲಭ್ಯಗಳನ್ನು ಕುಟುಂಬಕ್ಕೆ ಒದಗಿಸಲಾಗುವುದು’ ಎಂದು ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.