ಶ್ರೀರಂಗಪಟ್ಟಣ: ಕೋವಿಡ್ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ (ವಸ್ತುಸಂಗ್ರಹಾಲಯ) ಪ್ರವೇಶಕ್ಕೆ ಜಾರಿಗೊಳಿಸಿದ್ದ ಇ–ಟಿಕೆಟ್ ವ್ಯವಸ್ಥೆಯನ್ನು ಈಗಲೂ ಮುಂದುವರಿಸುತ್ತಿರುವುದಕ್ಕೆ ಪ್ರವಾಸಿಗರಿಂದ ವಿರೋಧ ವ್ಯಕ್ತವಾಗಿದೆ.
ಈ ವಸ್ತುಸಂಗ್ರಹಾಲಯ ವೀಕ್ಷಣೆಗೆ ಬರುವ ಬಹಳಷ್ಟು ಜನರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಇದ್ದರೂ ಕೆಲವರಿಗೆ ಇ–ಟಿಕೆಟ್ ಬುಕ್ ಮಾಡುವ ವಿಧಾನ ಗೊತ್ತಿರುವುದಿಲ್ಲ. ಕೆಲವರಿಗೆ ತಮ್ಮ ಖಾತೆಯಲ್ಲಿ ಹಣ ಇರುವುದಿಲ್ಲ. ಆದರೂ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಸಂಸ್ಥೆಯ ಆ್ಯಪ್ನಲ್ಲಿ ಲಾಗಿನ್ ಆಗಿ ಪ್ರವೇಶ ಶಲ್ಕ ಪಾವತಿ ಮಾಡಬೇಕಾಗಿದೆ. ಇದರಿಂದಾಗಿ ಬಹುತೇಕ ಪ್ರವಾಸಿಗರು ಅರಮನೆಗೆ ತೆರಳದೇ ವಾಪಸ್ ಹೋಗಬೇಕಾಗಿದೆ.
‘ಮೊದಲು ಇದ್ದ ರೀತಿಯಲ್ಲೇ ನೇರ ಪಾವತಿ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಚಿಕ್ಕಬಳ್ಳಾಪುರದ ಸಯ್ಯದ್ ಇರ್ಫಾನ್ ಒತ್ತಾಯಿಸಿದರು.
‘ಸದ್ಯ ಕೋವಿಡ್ ಅಪಾಯ ಇಲ್ಲ. ಇ–ಟಿಕೆಟ್ ವ್ಯವಸ್ಥೆ ರದ್ದುಪಡಿಸುವ ಕುರಿತು ಚರ್ಚೆ ನಡೆದಿದೆ. ಶೀಘ್ರ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಸಂಸ್ಥೆ ಸಹಾಯಕ ಸಂರಕ್ಷಣಾಧಿಕಾರಿ ಸುನೀಲ್ ತಿಳಿಸಿದರು.
ಮೈಸೂರು ಜಿಲ್ಲೆಯ ಸೋಮನಾಥ ಪುರದ ದೇಗುಲದಲ್ಲೂ ಇದೇ ಪರಿಸ್ಥಿತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.