ADVERTISEMENT

ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

30 ವರ್ಷಗಳಿಂದ ಪರಿಶಿಷ್ಟ ಕುಟುಂಬಗಳಿಗೆ ಸಿಗದ ಮನೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:17 IST
Last Updated 3 ನವೆಂಬರ್ 2025, 7:17 IST
ಕೃಷ್ಣೇಗೌಡನದೊಡ್ಡಿ ಗ್ರಾಮದಲ್ಲಿ ಗುಡಿಸಲು ಮತ್ತು ತಗಡಿನ ಶೆಡ್‌ಗಳಲ್ಲಿ ಬದುಕುತ್ತಿರುವ ಪರಿಶಿಷ್ಟ ಸಮುದಾಯ
ಕೃಷ್ಣೇಗೌಡನದೊಡ್ಡಿ ಗ್ರಾಮದಲ್ಲಿ ಗುಡಿಸಲು ಮತ್ತು ತಗಡಿನ ಶೆಡ್‌ಗಳಲ್ಲಿ ಬದುಕುತ್ತಿರುವ ಪರಿಶಿಷ್ಟ ಸಮುದಾಯ   

ಹಲಗೂರು: ಕೆರೆ ದಂಡೆಯ ಮೇಲೆ ತಗಡಿನ ಶೆಡ್‌ ಮತ್ತು ಗುಡಿಸಲುಗಳಲ್ಲಿ ಬದುಕುತ್ತಿರುವ ಕೃಷ್ಣೇಗೌಡನದೊಡ್ಡಿ ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ‘ನೆಲವೇ ಹಾಸಿಗೆ, ಗಗನವೇ ಹೊದಿಕೆ’ ಎಂಬಂತಾಗಿದೆ. 

ಕಳೆದ 30 ವರ್ಷಗಳಿಂದ ತಾತ್ಕಾಲಿಕ ಸೂರುಗಳಲ್ಲಿರುವ ಮೇದ, ಸೋಲಿಗ, ಭೋವಿ ಜನಾಂಗದ 20ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದ ವತಿಯಿಂದ ನಿವೇಶನ ಹಕ್ಕು ಪತ್ರ ಮತ್ತು ಸ್ವಂತ ಮನೆಯ ಆಸರೆಯೇ ಸಿಕ್ಕಿಲ್ಲ. 

ಹಲಗೂರು ಸಮೀಪದ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಕೇವಲ 1 ಕಿ.ಲೋ. ಮೀಟರ್ ದೂರದಲ್ಲಿ ನಲವತ್ತಕ್ಕೂ ಹೆಚ್ಚು ಮತದಾರರನ್ನು ಒಳಗೊಂಡ ಒಂದು ಚಿಕ್ಕ ದೊಡ್ಡಿ ಇದೆ. ಇಲ್ಲಿನ ನಿವಾಸಿಗಳು ಕನಿಷ್ಠ ಮೂಲಸೌಕರ್ಯಗಳು ಇಲ್ಲದೇ ಸಮಸ್ಯೆಗಳ ನಡುವೆಯೇ ಬದುಕು ಸಾಗಿಸುತ್ತಿದ್ದಾರೆ. 

ADVERTISEMENT

ಕಚ್ಚಾ ಮನೆಗಳಲ್ಲಿ ಇಂದಿಗೂ ವ್ಯವಸ್ಥಿತ ಶೌಚಾಲಯ ಕೊಠಡಿಗಳಿಲ್ಲ. ಸೀರೆ, ಬಟ್ಟೆ, ಕಟ್ಟಿಗೆ ಮತ್ತು ತಗಡು ಬಳಸಿ ನಿರ್ಮಿಸಿಕೊಂಡಿರುವ ಗುಡಾರವೇ ಇವರ ಪಾಲಿಗೆ ಶೌಚಾಲಯ. ಸ್ವಚ್ಛ ಭಾರತ ಯೋಜನೆ ಜಾರಿಯಾಗಿ ದಶಕ ಕಳೆದರೂ ಈ ಕುಟುಂಬಗಳ ಪಾಲಿಗೆ ಅದರ ಸೌಲಭ್ಯಗಳು ಮರೀಚಿಕೆಯಾಗಿವೆ.

ಬಿದಿರು ತರಲು ನಿಷೇಧ

ಈ ಮೇದ ಸಮುದಾಯದ ಕುಟುಂಬಗಳು ಕಾಡಿನಿಂದ ಬಿದಿರು ತಟ್ಟೆಗಳನ್ನು ತಂದು ಮಂಕರಿ, ಮೊರ ಇತ್ಯಾದಿ ಬಿದಿರಿನ ಸಾಮಗ್ರಿಗಳನ್ನು ಎಣೆದು ಜೀವನ ಕಟ್ಟಿಕೊಂಡಿದ್ದರು. ಬಸವನ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ‘ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಣೆಯಾದ ನಂತರ ಬಿದಿರು ತರುವುದು ನಿಷೇಧವಾಗಿದೆ.

ಭೋವಿ ಕುಟುಂಬಗಳು ಅಕ್ಕಪಕ್ಕದ ಪಟ್ಟಣಗಳಿಗೆ ಹೋಗಿ ಕಲ್ಲು ಕತ್ತರಿಸುವ ಕೆಲಸ ಮಾಡುವಂತಾಗಿದೆ. ಪರಿಣಾಮವಾಗಿ ಈಗ ಕೂಲಿಯೇ ಇಲ್ಲಿನ ಜನರ ಜೀವನಾಧಾರ.

ಸುಮಾರು 20ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ವಿತರಿಸಲಾಗಿದೆ. 40ಕ್ಕೂ ಹೆಚ್ಚು ಮತದಾರರು ಇದ್ದಾರೆ. ಆದರೆ, ಸರ್ಕಾರದಿಂದ ನಿವೇಶನ, ಮನೆಗಳು ಮಾತ್ರ ಇವರ ಪಾಲಿಗೆ ಗಗನ ಕುಸುಮವಾಗಿಯೇ ಉಳಿದಿದೆ.

ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ ಈ ನಿವಾಸಿಗಳಿಗೆ ಸಾಮಾನ್ಯ ಅರಿವು ಸಹ ಇಲ್ಲವಾಗಿದೆ. ಹಾಗಾಗಿ ಕೆಲವರು ಬೆಂಗಳೂರು ಸಾಹುಕಾರರು ನಿರ್ಮಾಣ ಮಾಡಿಕೊಂಡಿರುವ ಎಸ್ಟೇಟ್‌ಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನೂಕುವಂತಾಗಿದೆ.

ಈ ಹಿಂದೆ ಕಂದಾಯ ಸಚಿವರಾಗಿದ್ದ ಬಿ.ಸೋಮಶೇಖರ್, ವಸತಿ ಸಚಿವರಾಗಿದ್ದ ಅಂಬರೀಷ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು, ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಸರಣಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಫಲ ಸಿಗದೇ ಪರಿತಪಿಸುತ್ತಿದ್ದು, ಇವರ ಕೂಗು ಅರಣ್ಯ ರೋದನ ಆಗಿದೆ.

ಕಾಡಿನಿಂದ ಹೊರಬಿದ್ದ ನಿವಾಸಿಗಳು

‘30 ವರ್ಷಗಳ ಹಿಂದೆ ಮುತ್ತತ್ತಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ‘ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಸರ್ಕಾರ ಘೋಷಣೆ ಮಾಡಿತು. ಇದರ ಪರಿಣಾಮ ಬಸವನಬೆಟ್ಟ ಮತ್ತು ಸೋಲಿಗೇರಿಯ ಅರಣ್ಯ ಪ್ರದೇಶಗಳಲ್ಲಿ ಮೂವತ್ತು ವರ್ಷಗಳ ಹಿಂದೆ ಕಾಡಿನ ಉತ್ಪನ್ನಗಳಿಂದ ಬದುಕು ಕಟ್ಡಿಕೊಂಡಿದ್ದ ಹಲವು ಕುಟುಂಬಗಳನ್ನು ಕಾಡಿನಿಂದ ಹೊರಗೆ ಕಳುಹಿಸಲಾಯಿತು’ ಎಂದು ನಿವಾಸಿಗಳು ಸಮಸ್ಯೆ ತೋಡಿಕೊಂಡಿದ್ದಾರೆ.  ಇಲ್ಲಿನ ಕುಟುಂಬಗಳ ಸದಸ್ಯರು ಹಲವು ತಂಡಗಳಾಗಿ ಬೆಂಗಳೂರು ಮೈಸೂರು ರಾಮನಗರ ಸೇರಿದಂತೆ ವಿವಿಧ ನಗರಗಳ ಕಡೆಗೆ ವಲಸೆ ಹೋದರು. ಆದರೆ ಒಂದು ತಂಡ ಮಾತ್ರ ಮುತ್ತತ್ತಿಗೆ ಸಾಗುವ ಮಾರ್ಗದ ಮದ್ಯೆ ಕಾಡಿನ ತಪ್ಪಲಿನ ಗ್ರಾಮ ಕೃಷ್ಣೆಗೌಡನದೊಡ್ಡಿಯ ಕೆರೆಯ ದಂಡೆಯನ್ನು ಆಶ್ರಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.