ADVERTISEMENT

ಏಸುವನ್ನು ಒಪ್ಪಿಕೊಳ್ಳುವ ಬುಡಕಟ್ಟು ಜನರಿಗೆ ಮೀಸಲಾತಿ ಬೇಕಿಲ್ಲ: ಸಂಸದ ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 3:28 IST
Last Updated 6 ಮಾರ್ಚ್ 2021, 3:28 IST
ಪ‍್ರತಾಪಸಿಂಹ
ಪ‍್ರತಾಪಸಿಂಹ   

ಮೈಸೂರು: ‘ಬುಡಕಟ್ಟು ಜನಾಂಗದವರು ಕಾಡಿನಲ್ಲಿರುವ ದೇವರನ್ನು ಪೂಜೆ ಮಾಡುತ್ತಾರೆ. ನಾಗರಿಕ ಸಮಾಜದಿಂದ ದೂರ ಇರುತ್ತಾರೆ. ಅವರಲ್ಲಿ ವಿಶಿಷ್ಟ ಸಂಸ್ಕೃತಿ, ಆಚರಣೆ ಇದೆ. ಅವರಲ್ಲೂ ಏಸು ಸ್ವಾಮಿಯನ್ನು ದೇವರು ಎಂದು ಒಪ್ಪಿಕೊಳ್ಳುವಂಥ ವಿವೇಚನೆ ಬಂದ ಬಳಿಕ ಅವರಿಗೆ ಮೀಸಲಾತಿ ಬೇಕಿಲ್ಲ’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ತಡೆಯಬೇಕು, ಅವರ ವಿಶಿಷ್ಟತೆಯನ್ನು ಉಳಿಸಬೇಕು ಎಂಬ ಕಾರಣದಿಂದ ಮತಾಂತರಗೊಂಡವರಿಗೆ ಮೀಸಲಾತಿ ನೀಡಬಾರದು’ ಎಂದು ಹೇಳಿದ್ದೇನೆ ಎಂದರು.

‘ಜಾತಿ ವ್ಯವಸ್ಥೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಈ ಕಾರಣದಿಂದಲೇ ಪರಿಶಿಷ್ಟರಿಗೆ ಮೀಸಲಾತಿ ನೀಡಲಾಗಿದೆ. ಅವರನ್ನು ಈಗ ದಲಿತ ಕ್ರಿಶ್ಚಿಯನ್ನರು ಎಂದು ಹೇಳಿಕೊಂಡು ಮೀಸಲಾತಿ ಕೊಡಿ ಎಂದು ಬರುತ್ತಾರೆ. ಕ್ರಿಶ್ಚಿಯನ್‌ ಮತ್ತು ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂದು ಅವರೇ ಹೇಳುತ್ತಾರೆ. ಈ ಮಾತಿಗೆ ವಿವೇಚನೆ ಇದೆಯೇ ಎಂಬುದನ್ನು ಹೇಳಿದ್ದೇನೆ. ಅದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುವುದು ಬೇಡ’ ಎಂದರು.

ADVERTISEMENT

ಆದಿವಾಸಿಗಳಿಗೆ ನೀಡುವ ಸವಲತ್ತುಗಳನ್ನು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಬುಡಕಟ್ಟು ಜನರಿಗೆ ವಿತರಿಸಬಾರದು ಎಂದು ಸಂಸದ ಪ್ರತಾಪಸಿಂಹ ಅವರು ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.