ಶ್ರೀರಂಗಪಟ್ಟಣ: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಾಲಯದ ಗರ್ಭಗುಡಿಯನ್ನು ವಿವಿಧ ಮುಖ ಬೆಲೆಯ ನೋಟುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಚಾಮುಂಡೇಶ್ವರಿ ದೇವಿಗೆ ₹10, ₹20, ₹50, ₹100 ಮತ್ತು ₹500 ಮುಖ ಬೆಲೆಯ ನೋಟುಗಳಿಂದ ಅಲಂಕರಿಸಲಾಗಿತ್ತು. ಕಲಾವಿದ ಸಂದೇಶ್ ಮತ್ತು ಸ್ವೇಹಿತರ ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆ ವರೆಗೂ ಒಟ್ಟು ₹2 ಲಕ್ಷ ಹಣದಿಂದ ಧನಲಕ್ಷ್ಮಿಯ ಅಲಂಕಾರ ಮಾಡಿದ್ದರು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ್ ಶರ್ಮಾ ಅವರ ನೇತೃತ್ವದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ , ಸಹಸ್ರನಾಮ, ಶ್ರೀ ಚಕ್ರ ನವಾವರಣ, ಮಹಾ ಮಂಗಳಾರತಿ ಇತರ ವಿಧಿ, ವಿಧಾನಗಳು ಜರುಗಿದವು. ಸ್ಥಳೀಯರು ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರಸಾದ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.