ಶ್ರೀರಂಗಪಟ್ಟಣ: ‘ಜಾತಿ, ಪಂಗಡಗಳ ಹೆಸರಿನಲ್ಲಿ ಮೀಸಲಾತಿ ಕೊಡಿ ಎಂದು ಮಠಾಧೀಶರು ಹೋರಾಟಕ್ಕೆ ಇಳಿದಿರುವುದು ಎಷ್ಟು ಸರಿ ಎಂಬುದನ್ನು ಸ್ವಾಮೀಜಿಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಚಿಂತಕ ನಾರಾಯಣ ತಿರುಮಲಾಪುರ ಹೇಳಿದರು.
ಇಲ್ಲಿಗೆ ಸಮೀಪದ ಗಂಜಾಂನಲ್ಲಿ ದಿವ್ಯಾಂಗ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಸುರಕ್ಷಾ ಜೀವನ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ‘ರಾಜ್ಯ ಮಟ್ಟದ ವಿಶೇಷ ಚೇತನರ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೇಳುವುದು ಒಪ್ಪಿತ ವಿಷಯ. ಆದರೆ, ತಮ್ಮ ತಮ್ಮ ಕುಲ, ಜಾತಿ, ಪಂಗಡಗಳಿಗೆ ಮಾತ್ರ ಮೀಸಲಾತಿ ಕೊಡಿ ಎಂದು ಕೇಳುವುದು ಸರಿಯಲ್ಲ. ಇದು ಸಮಾಜದ ವಿಘಟನೆಗೆ ಕಾರಣವಾಗುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಅಂಗವಿಕಲರ ಬಗ್ಗೆ ಅನುಕಂಪ ತೋರುವ ಬದಲು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಮಾರ್ಗದರ್ಶನ ನೀಡಬೇಕು. ಅವರಲ್ಲೂ ವಿಶೇಷ ಶಕ್ತಿ ಮತ್ತು ಸೂಕ್ಷ್ಮ ಗ್ರಹಿಕೆಯ ಸಾಮರ್ಥ್ಯ ಇರುತ್ತದೆ. ಅದಕ್ಕೆ ಪೂರಕವಾಗಿ ಕೌಶಲ ಕಲಿಸಿ ಸ್ವಾವಲಂಬಿ ಬದುಕು ನಡೆಸಲು ಸರ್ಕಾರ ಮತ್ತು ಸಂಘ, ಸಂಸ್ಥೆಗಳು ನೆರ ವಾಗಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕತ ಶಿಕ್ಷಕ ಅಬ್ದಲ್ಲಾ ಬೇಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಿವ್ಯಾಂಗ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕ್ಯಾತನಹಳ್ಳಿ ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಯಿತ್ರಿ ಲತಾ ಮನೋಹರ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿವಾದಿ ಡಾ.ಬಿ.ಸುಜಯ ಕುಮಾರ್, ಡಾ.ಕೆ.ವೈ.ಶ್ರೀನಿವಾಸ್, ಡಾ.ಅಭಿನಯ್, ಎಚ್.ಆರ್. ಧನ್ಯ ಕುಮಾರ್, ಸಯ್ಯದ್ಖಾನ್ಬಾಬು, ಬಿ.ವಿ.ನಂದೀಶ್, ವೆಂಕಟೇಶ್, ಎ.ಸುರೇಶ್, ರೂಪದರ್ಶಿನಿ ಇದ್ದರು. 10ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.