ಮಳವಳ್ಳಿ (ಮಂಡ್ಯ): ಅನಾರೋಗ್ಯದಿಂದಾಗಿ ಐದು ದಿನದ ಹಿಂದೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ 55 ವರ್ಷದ ಮಹಿಳೆ, ವರದಿ ಬರುವ ಮುನ್ನವೇ ಮೃತಪಟ್ಟಿದ್ದು, ಮೃತದೇಹದ ಬಳಿಗೆ ತೆರಳಲೂ ಗ್ರಾಮಸ್ಥರು ಹಿಂಜರಿದ ಘಟನೆ ತಾಲ್ಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಹಿಳೆಯು ಬೆಂಗಳೂರಿನಲ್ಲಿ ಪುತ್ರಿಯ ಮನೆಯಲ್ಲಿದ್ದರು. ಏ.16ರಂದು ಗ್ರಾಮದ ತಮ್ಮ ಮನೆಗೆ ಬಂದಿದ್ದರು. 17ರಂದು ಕೋವಿಡ್ ಲಸಿಕೆ ಪಡೆದಿದ್ದರು. 18ರಂದು ಜ್ವರ ಕಾಣಿಸಿದ್ದು, ಚಿಕಿತ್ಸೆ ಪಡೆದಿದ್ದರು. 19ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಬಂದಿರಲಿಲ್ಲ. ಉಸಿರಾಟದ ಸಮಸ್ಯೆ ಎದುರಾಗಿದ್ದು, ಶನಿವಾರ ಬೆಳಿಗ್ಗೆ ಚಿಕಿತ್ಸೆ ಕೊಡಿಸಲು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.
ಆಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮಹಿಳೆಯ ಮನೆ ಜಗುಲಿಯ ಮೇಲೆ ಶವ ಇಟ್ಟು ತೆರಳಿದ್ದರು. ಕೊರೊನಾದಿಂದ ಮಹಿಳೆ ಮೃತಪಟ್ಟಿರಬಹುದು ಎಂದು ಭಾವಿಸಿದ ಗ್ರಾಮಸ್ಥರು ಭಯದಿಂದ ಶವದ ಬಳಿ ತೆರಳಲಿಲ್ಲ. ಐದಾರು ಗಂಟೆ ಶವ ಜಗುಲಿಯ ಮೇಲೆಯೇ ಬಿದ್ದಿತ್ತು.
ಗ್ರಾಮ ಪಂಚಾಯಿತಿ ಸದಸ್ಯ ಮನೋಹರ್, ತಾಲ್ಲೂಕು ಆಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು. ಮಂಡ್ಯದಿಂದ ಬಂದ ತಂಡ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.