
ಭಾರತೀನಗರ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಸ್ವಾವಲಂಬಿಗಳಾಗಲು ಸಂಜೀವಿನಿ ಒಕ್ಕೂಟ ಸಹಕಾರಿಯಾಗಲಿದೆ ಎಂದು ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ಅಮೃತ್ ರಾಜ್ ಹೇಳಿದರು.
ಇಲ್ಲಿಯ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತೀನಗರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಹೆಸರಿನಲ್ಲಿ ಸಂಜೀವಿನಿ ಒಕ್ಕೂಟ ತೆರೆಯಲಾಗಿದೆ. ಈ ಒಕ್ಕೂಟ ಎಲ್ಲ ರಾಜ್ಯಗಳಲ್ಲೂ ಇದೆ. ಇದು ಮಹಿಳೆಯರಿಗಾಗಿ ಮಾಡಿರುವ ಯೋಜನೆ. ಒಕ್ಕೂಟದಿಂದ ಕೌಶಲಾಭಿವೃದ್ಧಿ, ಉದ್ಯಮ ಶೀಲತೆಯನ್ನು ರೂಢಿಸಿಕೊಳ್ಳಲು ಉಪಯುಕ್ತವಾಗಲಿದೆ. ಇದರಿಂದ ಬರುವ ಹಣದಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಈ ಒಕ್ಕೂಟವನ್ನು ಬಳಸಿಕೊಂಡವರಿಗೆ ವಿವಿಧ ರೀತಿಯ ಯೋಜನೆಯಲ್ಲಿ ಹೆಚ್ಚು ಹಣ ಗಳಿಸಬಹುದಾಗಿದೆ ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಹೆಸರಿನಲ್ಲಿ ದೇಶದಾದ್ಯಂತ ತಂದಿರುವ ಈ ಯೋಜನೆ ಎಲ್ಲ ರಾಜ್ಯಗಳಲ್ಲಿಯೂ ಜಾರಿಯಲ್ಲಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಒಕ್ಕೂಟಗಳು ನಡೆಯುತ್ತಿವೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಒಕ್ಕೂಟದಲ್ಲಿ ಮಹಿಳೆಯರು ತೊಡಗಿಸಿಕೊಂಡು ಹಣ ಗಳಿಸುತ್ತಿದ್ದಾರೆ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಉದ್ಘಾಟಿಸಿದರು. ಭಾರತೀನಗರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಸ್.ಎಸ್.ಮಂಗಳಗೌರಿ ಮಾತನಾಡಿದರು.
ಒಕ್ಕೂಟದ ಕಾರ್ಯದರ್ಶಿ ನಾಗಮ್ಮ, ಖಜಾಂಚಿ ಸುಜಾತ, ಜ್ಯೋತಿ, ಸುಧಾ, ಸವಿತ, ಮಮತ, ಲಕ್ಷ್ಮಿ, ವಸಂತಮ್ಮ, ಲೀಲಾರಾಮೇಗೌಡ, ಗ್ರಾ.ಪಂ. ಸದಸ್ಯ ಮಂಜುನಾಥ್, ಅಂಬರಹಳ್ಳಿ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.